ಬೆಂಗಳೂರು: ನಗರ ಜಿಲ್ಲಾ ಪಂಚಾಯ್ತಿಯ ಎರಡನೇ ಅವಧಿಗೆ ಬಿಜೆಪಿಯ ವಾಣಿಶ್ರೀ ವಿಶ್ವನಾಥ್ ಅಧ್ಯಕ್ಷರಾಗಿ ಮತ್ತು ಜೆನ್ನೂಬಾಯಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನಗರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಿಂಗನಾಯಕನಹಳ್ಳಿ ಕ್ಷೇತ್ರದ ಸದಸ್ಯೆ ವಾಣಿಶ್ರೀ ಹಾಗೂ ಮಾಚೋಹಳ್ಳಿ ಕ್ಷೇತ್ರದ ಸದಸ್ಯೆ ಜೆನ್ನೂಬಾಯಿ ತಲಾ 22 ಮತಗಳನ್ನು ಪಡೆದು ಆಯ್ಕೆಯಾದರು.ವಾಣಿಶ್ರೀ ವಿರುದ್ಧ ಎಂಟು ಮತಗಳು ಹಾಗೂ ಜೆನ್ನೂಬಾಯಿ ವಿರುದ್ಧ ಆರು ಮತಗಳು ಬಿದ್ದವು.
ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಮಹಿಳೆ)ಕ್ಕೆ ಮೀಸಲಾಗಿತ್ತು. ಪ್ರಾದೇಶಿಕ ಆಯುಕ್ತ ಕೆ.ಶಿವರಾಮ್ ಚುನಾವಣಾಧಿಕಾರಿಯಾಗಿದ್ದರು. ಜಿ.ಪಂ.ನಲ್ಲಿ 34 ಸದಸ್ಯರಿದ್ದಾರೆ. ಬಿಜೆಪಿ 16, ಕಾಂಗ್ರೆಸ್ 14 ಹಾಗೂ ಜನತಾದಳ (ಜಾತ್ಯತೀತ)ದ ನಾಲ್ವರು ಸದಸ್ಯರನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ 8 ನಾಮಪತ್ರಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 4 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಮತದಾನ ಸಂದರ್ಭದಲ್ಲಿ ಜೆಡಿ(ಎಸ್) ಸದಸ್ಯರು ತಟಸ್ಥರಾಗಿದ್ದರು.
ನೂತನ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್ ಮಾತನಾಡಿ, `ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಗ್ರಾಮ ಮತ್ತು ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡಲು, ಕುಡಿಯುವ ನೀರು ಒದಗಿಸಲು, ಹಳ್ಳಿಯ ಮನೆ ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು~ ಎಂದರು.
`ಜಿಲ್ಲೆಗೆ ಅಧಿಕ ಪ್ರಮಾಣದಲ್ಲಿ ಅನುದಾನ ದೊರಕುವಂತೆ ಪ್ರಯತ್ನ ಮಾಡುತ್ತೇನೆ. ಈ ಅನುದಾನ ಸದ್ಬಳಕೆಯಾಗಬೇಕು. ಅನುದಾನವನ್ನು ಜನೋಪಯೋಗಿ ಕೆಲಸಗಳಿಗೆ ವಿನಿಯೋಗಿಸುವ ಉದ್ದೇಶವಿದೆ~ ಎಂದರು.