ಬೆಂಗಳೂರು: ಉದ್ಯಾನ ನಗರಿಯಲ್ಲಿ ಬೇಸಿಗೆಯ ಕಾವು ಏರುತ್ತಿರುವಾಗಲೇ ವರುಣನ ಅನಿರೀಕ್ಷಿತ ಆಗಮನವು ವಾತಾವರಣಕ್ಕೆ ತಂಪನ್ನೆರೆಯಿತು. ಬೆಳಿಗ್ಗೆಯಿಂದಲೂ ಬಿಸಿಲು ಝಳಪಿಸುತಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಸೂರ್ಯ ಮೋಡದ ಹಿಂದೆ ಮರೆಯಾಗಿ, ಹಿತವಾದ ಗಾಳಿ ಮತ್ತು ಮಿತವಾದ ಚಳಿಯ ಸೂಚನೆಯೊಂದಿಗೆ ಸಂಜೆ ಧಾರಕಾರ ಮಳೆ ಸುರಿಯಿತು.
ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸೋಮವಾರ ಸಂಜೆ ಮಳೆಯ ಸಿಂಚನ ಖುಷಿ ನೀಡಿತು. ಮಣ್ಣಿನ ವಾಸನೆಗೆ ಮನಸೋತ ಭಾವುಕ ಮಂದಿ ಮಳೆಯಿಂದ ಸಂತಸಗೊಂಡರೆ, ಕಚೇರಿ ಕೆಲಸ ಮುಗಿಸಿ ಮನೆ ಸೇರಲು ತವಕಿಸುತ್ತಿದ್ದವರು ತೊಂದರೆಯಾಯಿತು.
ನಗರದ ಹಲವೆಡೆ ಮಳೆಯಾಗಿದ್ದು, ಅಂಬೇಡ್ಕರ್ ವೀದಿಯ ಕಾಫಿ ಬೋರ್ಡ್ ಸಮೀಪ ಮ್ಯಾನ್ಹೋಲ್ ಕಟ್ಟಿಕೊಂಡು ರಸ್ತೆಯಲ್ಲಿ ನೀರು ನಿಂತಿತ್ತು. ಉಳಿದಂತೆ ಯಾವುದೇ ಹಾನಿಯಾಗಿಲ್ಲ.
ಬೆಂಗಳೂರು ನಗರದ ಒಳಭಾಗದಲ್ಲಿ 13.7 ಮಿ.ಮೀ. ಎಚ್ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತ 3.7 ಮಿಲಿ ಮೀಟರ್ ಮಳೆಯಾಗಿದೆ. ಮೂರು ತಿಂಗಳಿಗೊಮ್ಮೆ ಸುರಿಯುವ ಋತುಮಾನದ ಮಳೆ ಇದಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.