ಬೆಂಗಳೂರು: ದೃಷ್ಟಿಹೀನತೆಯು ಶೈಕ್ಷಣಿಕ ಸಾಧನೆಗೆ ಅಡ್ಡಿಯಲ್ಲ ಎಂದು ರುಜುವಾತು ಪಡಿಸಿದ್ದಕ್ಕೆ ವಿಶ್ವಸಂಸ್ಥೆಯ ಯುವ ಪ್ರಶಸ್ತಿಗೆ ಭಾಜನರಾದ ಬೆಂಗಳೂರು ಮೂಲದ ಯುವತಿಯ ಯಶೋಗಾಥೆ ಇದು.
ಶೈಕ್ಷಣಿಕ ಸಾಧನೆಗಾಗಿ ನಗರದ ಅಶ್ವಿನಿ ಅಂಗಡಿ ಅವರಿಗೆ ವಿಶ್ವಸಂಸ್ಥೆಯು `ಯೂಥ್ ಕರೇಜ್ ಅವಾರ್ಡ್' ನೀಡಿ ಗೌರವಿಸಿದೆ.
ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ಝೈ ಜನ್ಮದಿನದ ಪ್ರಯುಕ್ತ ಶುಕ್ರವಾರ ವಿಶ್ವಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟನ್ ಮಾಜಿ ಪ್ರಧಾನಿ ಗಾರ್ಡನ್ ಬ್ರೌನ್ ಹಾಗೂ ಮಲಾಲಾ ತಂದೆ ಜಿಯಾವುದ್ದೀನ್ ಯೂಸುಫ್ಝೈ ಅವರು ಅಶ್ವಿನಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರೌನ್, ಅಶ್ವಿನಿ ಅವರನ್ನು ಮಲಾಲಾಗೆ ಹೋಲಿಸಿ, `ನೀವು ವಿಶ್ವದ ಯುವಜನತೆಗೆ ಮಾದರಿ' ಎಂದು ಬಣ್ಣಿಸಿದರು.
24 ವರ್ಷದ ಅಶ್ವಿನಿ ಬಡಕುಟುಂಬದಲ್ಲಿ ಹುಟ್ಟಿದವರು. ದೃಷ್ಟಿಹೀನತೆಯ ಕಾರಣದಿಂದ ಅವರು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಕಿರುಕುಳ ಅಷ್ಟಿಷ್ಟಲ್ಲ. ಆದರೂ ಛಲಬಿಡದೆ ಶಿಕ್ಷಣ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಶ್ವಿನಿಯ ಪೋಷಕರು ನಗರದಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದಾರೆ.