ಬೆಂಗಳೂರು: ಹೆಬ್ಬಾಳ ಸಮೀಪದ ಹೆಣ್ಣೂರು ಬಂಡೆ ಪ್ರದೇಶದಲ್ಲಿರುವ ಗೊಂಬೆ ಕಾರ್ಖಾನೆಯೊಂದರ ಆವರಣದಲ್ಲಿ ಶೇಖರಿಸಲಾಗಿದ್ದ ತ್ಯಾಜ್ಯದ ರಾಶಿಗೆ ಭಾನುವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗೊಂಬೆ ತಯಾರಿಕೆಯಲ್ಲಿ ಬಳಸಲಾದ ಫೈಬರ್ ಮತ್ತಿತರ ನಿರುಪಯುಕ್ತ ವಸ್ತುಗಳನ್ನು ಕಾರ್ಖಾನೆಯ ಆವರಣದಲ್ಲಿ ಶೇಖರಿಸಲಾಗಿತ್ತು. ಆ ನಿರುಪಯುಕ್ತ ವಸ್ತುಗಳ ರಾಶಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು.
ಇದನ್ನು ನೋಡಿದ ಕಾರ್ಖಾನೆಯ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ನಾಲ್ಕು ಅಗ್ನಿನಂದಕ ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಒಂದು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ಅನಾಹುತದಲ್ಲಿ ಹೆಚ್ಚಿನ ನಷ್ಟ ಸಂಭವಿಸಿಲ್ಲ. ಘಟನೆ ಸಂಬಂಧ ಕಾರ್ಖಾನೆಯ ಮಾಲೀಕರು ದೂರು ಕೊಟ್ಟಿದ್ದಾರೆ. ಅಗ್ನಿ ಅನಾಹುತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೆಣ್ಣೂರು ಪೊಲೀಸರು ಹೇಳಿದ್ದಾರೆ.