ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಎಂಟಿಡಿಸಿ) ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ‘ಮಹಾರಾಷ್ಟ್ರ ಅನ್ಲಿಮಿಟೆಡ್’ ಎಂಬ ಧ್ಯೇಯವಾಕ್ಯದೊಂದಿಗೆ ನಗರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.
ಈ ಸಂಬಂಧ ಇತ್ತೀಚೆಗೆ ರೋಡ್ ಶೋ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲಾಯಿತು.
‘ಮಹಾರಾಷ್ಟ್ರ ರಾಜ್ಯಕ್ಕೆ ಪ್ರವಾಸಿಗರು ಹೆಚ್ಚು ಹೆಚ್ಚು ಬರುವಂತೆ ಮಾಡುವ ನಿಟ್ಟಿನಲ್ಲಿ ಪ್ರಮುಖ ನಗರಗಳಲ್ಲಿ ರೋಡ್ ಶೋ ಏರ್ಪಡಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಪ್ರವಾಸಿ ಸ್ಥಳಗಳನ್ನು ಮತ್ತಷ್ಟು ಆಕರ್ಷಣೀಯವನ್ನಾಗಿ ಮಾಡಲಾಗುತ್ತದೆ’ ಎಂದು ಹೇಳಿದರು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಜಗದೀಶ್ ಪಾಟೀಲ್.
ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಎಂಟಿಡಿಸಿ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲದೇ ದೇಶದ ವಿವಿಧ ಪ್ರಮುಖ ನಗರಗಳಾದ ದೆಹಲಿ, ಹೈದರಾಬಾದ್, ಚಂಡೀಗಢ, ಆಗ್ರಾ ಮತ್ತು ಗೋವಾದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದೆ.
ಮಹಾರಾಷ್ಟ್ರದ ಹೆಸರಾಂತ ಸಾಂಪ್ರದಾಯಿಕ ಲಾವಣಿ ಜಾನಪದ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅಜಂತಾ ಮತ್ತು ಎಲ್ಲೋರಾ ಗುಹೆಗಳು, ಪೆಂಚ್ನಲ್ಲಿರುವ ಹುಲಿಧಾಮ, ಕಡಲ ಕಿನಾರೆಗಳು, ರಾಯಗಢದ ಬಂದರು, ಲೋಣವಾಳ ಮತ್ತು ಖಂಡಾಲಾ ಘಟ್ಟ ಪ್ರದೇಶ, ಶಿರಡಿ ಸತ್ಯಸಾಯಿ ದೇವಾಲಯ, ಪಂಡರಾಪುರ, ನಾಂದೇಡ್ ಮತ್ತು ಕೊಲ್ಲಾಪುರದ ಧಾರ್ಮಿಕ ಕ್ಷೇತ್ರಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.