ಕೋಲಾರ: ಹೊಸ ಕೊಳವೆ ಬಾವಿಗಳಿಗೆ ವಿದ್ಯುತ್ ಪೂರೈಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಮಾಹಿತಿ ಪಡೆಯುವ ಸಲುವಾಗಿ ಭೇಟಿ ಮಾಡಿದಾಗ ನಗರಸಭೆ ಉಪಾಧ್ಯಕ್ಷ ಎಸ್.ಆರ್. ಮುರಳಿಗೌಡ ಜೊತೆ ಬೆಸ್ಕಾಂ ಸಹಾಯಕ ಎಂಜಿನಿಯರ್ ಗುರುಸಿದ್ದಯ್ಯ ಅನುಚಿತವಾಗಿ ವರ್ತಿಸಿದರೆಂದು ಆರೋಪಿಸಿ ನಗರಸಭೆ ಅಧ್ಯಕ್ಷೆ ನಾಜಿಯಾ ಸೇರಿ ಹಲವು ಸದಸ್ಯರು ಸ್ಥಳದಲ್ಲೆ ಪ್ರತಿಭಟಿಸಿದ ಘಟನೆ ಶುಕ್ರವಾರ ನಗರದ ಕೆಇಬಿ ಸಮುದಾಯದ ಬಳಿ ಇರುವ ಬೆಸ್ಕಾಂ ಕಚೇರಿಯಲ್ಲಿ ನಡೆದಿದೆ.
‘ಮಧ್ಯಾಹ್ನ 12ರ ಸುಮಾರಿಗೆ ಗುರುಸಿದ್ದಯ್ಯ ಅವರ ಕೊಠಡಿಗೆ ತೆರಳಿದ ನನ್ನ ಪರಿಚಯ ಹೇಳಿಕೊಂಡು ಕುಳಿತುಕೊಳ್ಳಲು ಮುಂದಾದಾಗ, ಅಧಿಕಾರಿಯು ಕುಳಿತುಕೊಳ್ಳದಿರುವುದಂತೆ ಸೂಚಿಸಿದರು. ನಗರಸಭೆ ಉಪಾಧ್ಯಕ್ಷರಾಗಿರುವ ನನ್ನ ಜೊತೆ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರೂ ಅಧಿಕಾರಿ ಕೇಳಲಿಲ್ಲ. ಮಾತಿನ ಘರ್ಷಣೆ ಮಿತಿಮೀರಿ ಅಧಿಕಾರಿ ರಾಡ್ ಒಂದನ್ನು ತೆಗೆದುಕೊಂಡು ನನ್ನ ಮೇಲೆ ಹಲ್ಲೆ ನಡೆಸಲು ಮುನ್ನುಗಿದರು. ಅದನ್ನು ಪ್ರತಿಭಟಿಸಿದ ನಾನು ಅಲ್ಲಿಯೇ ಧರಣಿ ಕುಳಿತೆ. ಮಾಹಿತಿ ಪಡೆದ ನಗರಸಭೆ ಅಧ್ಯಕ್ಷೆ ನಾಜಿಯಾ, ಇತರೆ ಸದಸ್ಯರೂ ನನ್ನೊಂದಿಗೆ ಧರಣಿ ಕುಳಿತರು’ ಎಂದು ಮುರಳಿಗೌಡ ತಿಳಿಸಿದ್ದಾರೆ
.
ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ನಟರಾಜ್ ಅವರು ಸ್ಥಳಕ್ಕೆ ಬಂದು, ಅನುಚಿತವಾಗಿ ವರ್ತಿಸಿರುವ ಅಧಿಕಾರಿಯನ್ನು ವರ್ಗಾಯಿಸಲಾಗುವುದು. ಅಮಾನತ್ತಿಗೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿಯನ್ನು ವಾಪಸು ಪಡೆಯಲಾಯಿತು
.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಘು, ಸದಸ್ಯರಾದ ಕೆ.ಎನ್.ಮಧುಸೂದನ್ಕುಮಾರ್, ಸಲಾವುದ್ದೀನ್ ಬಾಬು, ಜಾಫರ್, ರಮೇಶ್, ಚಾಂದ್ಪಾಷಾ, ಮಾನ್ನಾ, ನಯಾಜ್, ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ಸುರೇಶ್ಗೌಡ ಸೇರಿದಂತೆ ಹಲವು ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.