ಸಾಗರ: ನಗರಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ಡ್ಯಾಂ ಸಂಪೂರ್ಣವಾಗಿ ಬರಿದಾಗಿದ್ದು ಏ. 19ರಿಂದ ನಳ ಸಂಪರ್ಕ ಹೊಂದಿರುವವರಿಗೆ ಕುಡಿಯುವ ನೀರು ಪೂರೈಕೆ ಬಂದ್ ಮಾಡಲಾಗಿದೆ ಎಂದು ನಗರಸಭೆ ಗುರುವಾರ ಘೋಷಿಸಿದೆ.
ಪ್ರತಿವರ್ಷ ಸಾಧಾರಣವಾಗಿ ಮೇ 15ರ ನಂತರ ಈ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ವರ್ಷ ಏಪ್ರಿಲ್ ಮುಗಿಯುವುದರೊಳಗೆ ಹೀಗಾಗಿರುವುದು ನೀರು ಪೂರೈಕೆ ಸಮಸ್ಯೆ ನಾಗರಿಕರನ್ನು ತೀವ್ರವಾಗಿ ಕಾಡಲಿದೆ.
ನಗರಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ಡ್ಯಾಂನ ಹೂಳೆತ್ತುವ ಮೂಲಕ ಅಲ್ಲಿ ಸಂಗ್ರಹವಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಸಮಸ್ಯೆ ಬಗೆಹರಿಸಬೇಕು ಎಂಬ ಒತ್ತಾಸೆ ನಗರದ ನಾಗರಿಕರಿಂದ, ಸಂಘ-ಸಂಸ್ಥೆಗಳಿಂದ ಕೇಳಿ ಬಂದಿತ್ತು. ಆದರೆ, ನಗರಸಭೆ ಆಡಳಿತ ಇದಕ್ಕೆ ಕಿವಿಗೊಡದ ಪರಿಣಾಮ ಅದರ ಬಿಸಿ ಈಗ ಜನರಿಗೆ ತಟ್ಟಿದೆ.
ಪ್ರತಿವರ್ಷ ನೀರು ಪೂರೈಕೆ ಕೊರತೆ ಉಂಟಾಗುತ್ತಿದ್ದರೂ ಮೇ ತಿಂಗಳ ಮಧ್ಯ ಭಾಗದವರೆಗೆ ಬಸವನಹೊಳೆ ಡ್ಯಾಂನಲ್ಲಿ ಸಂಗ್ರಹವಿರುವ ನೀರು ಪೂರ್ತಿಯಾಗಿ ಖಾಲಿ ಆಗದಂತೆ ನಿರ್ವಹಿಸ ಲಾಗುತ್ತಿತ್ತು. ಈ ಬಾರಿ ಅಂತಹ ನಿರ್ವಹಣೆಯಲ್ಲಿ ನಗರಸಭೆ ವಿಫಲವಾಗಿದೆ. ಡ್ಯಾಂನ ತಲೆಕಟ್ಟಿನಲ್ಲಿರುವ ಕೃಷಿ ಭೂಮಿಯ ಮಾಲೀಕರು ಅಕ್ರಮವಾಗಿ ಡ್ಯಾಂನ ನೀರನ್ನು ಬಳಸಿಕೊಳ್ಳುವುದನ್ನು ತಡೆಯುವತ್ತ ನಗರಸಭೆ ಆಡಳಿತ ಗಮನಹರಿಸದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.