ಬೆಂಗಳೂರು: `ಇಂದಿನ ಜನರು ಮಾತನಾಡುವುದನ್ನೇ ಮರೆತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ನಗು ಜನರಿಂದ ಮರೆಯಾಗಿದೆ. ಹೀಗಾಗಿ ನಗು ಮರೆತವರ ಮುಖಗಳ ಮೇಲೆ ನಗುವಿನ ಗೆರೆ ಮೂಡಿಸಿದರೆ ಹನಿಗವಿತೆ ಸಾರ್ಥಕ~ ಎಂದು ಹನಿಗವಿ ಡುಂಡಿರಾಜ್ ಅಭಿಪ್ರಾಯಪಟ್ಟರು.
ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಡುಂಡಿರಾಜ್ ಅವರೊಂದಿಗೆ ಒಂದು ಸಂಡೆ~ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಈಗಿನ ಆಧುನಿಕ ಯುಗದಲ್ಲಿ ಜನರಿಗೆ ಯಾವುದಕ್ಕೂ ಸಮಯವಿಲ್ಲ. ಅದಕ್ಕಾಗಿ ಜನರು ಯಾವುದನ್ನೇ ಆಗಲಿ ಶಾರ್ಟ್ ಅಂಡ್ ಸ್ವೀಟಾಗಿ ಬೇಕು ಎಂದು ಕೇಳುತ್ತಾರೆ. ಆದ್ದರಿಂದ, ಹನಿಗವಿತೆಗಳು ಇಂದು ಪ್ರಸಿದ್ಧವಾಗುತ್ತಿವೆ~ ಎಂದರು.
`ಯಾವುದೇ ಒಂದು ಕೃತಿಯನ್ನು ಬರೆಯುವುದೆಂದರೆ, ಅಷ್ಟು ಸುಲಭವಲ್ಲ. ಕೃತಿ ಅಂತಿಮವಾಗಿ ಓದುಗನಿಗೆ ಹಿಡಿಸಬೇಕು. ಹೀಗಾದಾಗ ಮಾತ್ರ ಕೃತಿಗೆ ಮೌಲ್ಯ ದೊರೆಯುತ್ತದೆ~ ಎಂದು ಅವರು ನುಡಿದರು.
`ನಾನು ಮೊದಲು ಬರೆದ ಸಾಹಿತ್ಯ ಪ್ರಕಾರ ನಾಟಕ. ನಂತರ ಹನಿಗವನಗಳನ್ನು ಬರೆಯಲು ಆರಂಭಿಸಿದೆ. ನನ್ನ ಬರವಣಿಗೆಗೆ ಸ್ನೇಹಿತರು ಪ್ರೋತ್ಸಾಹ ನೀಡಿದರು. ಹೀಗಾಗಿ ನಾನೊಬ್ಬ ಹನಿಗವಿಯಾಗಲು ಸಾಧ್ಯವಾಯಿತು~ ಎಂದರು.
`ನಾನು ಬರೆದ ಮೊದಲ ನಾಟಕವನ್ನು ಸುಮ್ಮನೆ ತೆಲುಗು ಅನುವಾದವೆಂದು ಬರೆದಿದ್ದೆ. ಆದರೆ, ಅದಕ್ಕೆ ಮೂಲಕೃತಿ ಇರಲಿಲ್ಲ. ನಾನೇ ಬಹುಮಾನ ಬರಲಿ ಎಂದು ಆ ರೀತಿ ಬರೆದಿದ್ದೆ. ಕೊನೆಗೆ ಆ ಕೃತಿಗೇ ಬಹುಮಾನ ಬಂದು ತುಂಬ ಸಂತೋಷವಾಗಿತ್ತು~ ಎಂದರು.
`ಯು.ಆರ್.ಅನಂತಮೂರ್ತಿ ಅವರ ಪ್ರಕಾರ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಒಂದು ರೀತಿಯ ಉಡಾಫೆಯ ಅವಶ್ಯಕತೆಯಿದೆ. ಹಾಗೆಯೇ ನನ್ನಲ್ಲೂ ಒಂದು ಉಡಾಫೆಯಿದೆ. ನಾನು ವೈಎನ್ಕೆ ಅವರ ಶಿಷ್ಯ. ಆದ್ದರಿಂದ ಅವರ ಪ್ರಭಾವ ನನ್ನ ಮೇಲಿದೆ~ ಎಂದು ಹೇಳಿದರು.
ತಮ್ಮ ಹೆಸರಿನ ಬಗ್ಗೆ ಹೇಳಿದ ಅವರು, `ಡುಂಡಿ ಅಂದರೆ ಗಣೇಶನ ಹೆಸರು. ಅಲ್ಲದೇ ಗಣೇಶನೇ ನನ್ನ ಸ್ಫೂರ್ತಿಯಾಗಿದ್ದಾನೆ. ಏಕೆಂದರೆ, ಗಣೇಶ ಬೇರೆ ದೇವರಂತಲ್ಲ. ಎಷ್ಟೇ ಹಾಸ್ಯ ಮಾಡಿದರೂ ಇದುವರೆಗೂ ಕೋಪಗೊಳ್ಳದ ದೇವರೆಂದರೆ, ಅದು ಗಣೇಶ ಮಾತ್ರ. ಡುಂಡಿರಾಜ್ ಹೆಸರಿನ ಬಗ್ಗೆ ನನಗೆ ಪ್ರೀತಿ ಇದೆ~ ಎಂದು ಅವರು ನುಡಿದರು.
ಮಾತುಕ(ವಿ)ತೆಯ ಒಂದಿಷ್ಟು ಝಲಕ್
`ಕೃತಿ ಬರೆಯುವುದು ಎಂದರೆ,
ಅದು ಹೆರಿಗೆಯ ಹಾಗೆ... ಏನಂತಿ?
ಹಾಗಾದರೆ, ನೀವು ಸಾಹಿತಿಯಲ್ಲ... ಬಾಣಂತಿ~
`ಹೆಣ್ಣುಮಕ್ಕಳಿಗೆ ಗಂಡ ಸದಾ ತಮ್ಮನೇ ಹೊಗಳುತ್ತಿರಬೇಕು ಎಂಬ ಆಸೆ ಇರುತ್ತದೆ. ಆಗ, ಗಂಡ ಏನಾದರೂ ಬೇರೆಯವರನ್ನು ಅವಳ ಮುಂದೆ ಹೊಗಳಿದರೆ, ಭೂಮಿ ಸ್ಫೋಟವಾಗುತ್ತದೆ
ಸದ್ದಿಲ್ಲದೆ~
`ಆಹಾ, ಸುಂದರ ಯುವತಿ,
ನೀ ಆಗಬಾರದೆ, ನನ್ನ ಹೆಂಡತಿಯ ಸವತಿ~
`ತೆಗೆಯಿರಿ ಇದು ಯಾವ ಸೀಮೆಯ ಒಪ್ಪಂದ?
ನಮ್ಮ ಬೀಜಗಳೇನು ಇವರಪ್ಪಂದ~
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.