ಮೈಸೂರು: ಸ್ಯಾಂಡಲ್ವುಡ್ನ ತಾರೆಯಾಗಲು ಅದೃಷ್ಟ ಹುಡುಕಿ ಕೊಂಡು ಬರುತ್ತಿದ್ದರೂ ಈ ಹುಡುಗಿಗೆ ಐಎಎಸ್ ಆಧಿಕಾರಿಯಾಗುವತ್ತಲೇ ಚಿತ್ತ!
ಎಷ್ಟೇ ದೊಡ್ಡ ಬ್ಯಾನರ್ನ ನಿರ್ದೇಶಕರು ಬಂದು ಕೇಳಿದರೂ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ, ಸಮಯ ಉಳಿದರೆ ಉಳಿದದ್ದು ಎನ್ನುವ ಈ ಹುಡುಗಿ `ದೌಲತ್~ ಕನ್ನಡ ಚಲನಚಿತ್ರದ ನಾಯಕಿ ತನುಷಾ ನಾರಾಯಣ.
ಗೋಕುಲಂನ ನಿರ್ಮಲಾ ಕಾನ್ವೆಂಟ್ನ ವಿದ್ಯಾರ್ಥಿನಿಯಾಗಿರುವ ತನುಷಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 94.14ರಷ್ಟು ಫಲಿತಾಂಶ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ 123, ಇಂಗ್ಲಿಷ್ನಲ್ಲಿ 98, ಸಮಾಜವಿಜ್ಞಾನ 96, ವಿಜ್ಞಾನ 95, ಗಣಿತಕ್ಕೆ 90 ಅಂಕ ಗಳಿಸಿದ್ದಾರೆ. ಈ ಹುಡುಗಿ ಈಗಾಗಲೇ ಬಾಲನಟಿಯಾಗಿ ಸುಮಾರು 14 ಕನ್ನಡ ಮತ್ತು ಒಂದು ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾಳೆ.
ಭಾನುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ತಾಯಿ ಗಾಯತ್ರಿ ನಾರಾಯಣ, ತಂದೆ, ಪೀಠೋಪಕರಣ ವ್ಯಾಪಾರಸ್ಥರಾಗಿರುವ ನಾರಾಯಣ್, ತಂಗಿ ನಿರೂಷಾ, ತಮ್ಮ ಧೀರಜ್ ಜೊತೆಗೆ ಆಗಮಿಸಿದ್ದ ತನುಷಾ ತಮ್ಮ ಜೀವನದ ಗುರಿ ಸ್ಪಷ್ಟಪಡಿಸಿದರು.
`ನಾನು ಐಎಎಸ್ ಅಧಿಕಾರಿ ಯಗಬೇಕೆಂಬ ಮಹತ್ತರ ಗುರಿಯನ್ನು ಹೊಂದಿದ್ದೇನೆ. ಮೈಸೂರು ಜಿಲ್ಲಾಧಿಕಾರಿ ಯಾಗಿ ಬಂದು ಸೇವೆ ಸಲ್ಲಿಸುವ ಆಸೆಯಿದೆ. ಅದಕ್ಕಾಗಿ ಈಗಿ ನಿಂದಲೇ ಸಾಮಾನ್ಯ ಜ್ಞಾನ, ಸುದ್ದಿಪತ್ರಿಕೆ ಗಳನ್ನು ಓದುತ್ತಿದ್ದೇನೆ. ಪಿಯುಸಿಯಲ್ಲಿ ವಿಜ್ಞಾನ ವಿದ್ಯಾಭ್ಯಾಸ ಮಾಡುತ್ತೇನೆ. ನಂತರ ಪದವಿಯ ಜೊತೆಗೆ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತೇನೆ~ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಯಿ ಗಾಯತ್ರಿ ನಾರಾಯಣ್, `ಪಾಶ್ಚಾತ್ಯ ನೃತ್ಯ, ಸಾಲ್ಸಾ ನೃತ್ಯ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತಗಳಲ್ಲಿ ರಾಜ್ಯಮಟ್ಟದ ಸಾಧನೆ ಯನ್ನು ತನುಷಾ ಮಾಡಿದ್ದಾಳೆ. ಖಾಸಗಿ ಚಾನೆಲ್ನ ಕುಣಿಯೋಣು ಬಾರಾ ಕಾರ್ಯಕ್ರಮದಲ್ಲಿ ರನ್ನರ್ಸ್ ಅಪ್ ಆಗಿದ್ದಾಳೆ. ಯೋಗದಲ್ಲಿಯೂ ಪರಿಣಿತಿ ಗಳಿಸಿದ್ದಾಳೆ. ಆದರೆ ಅವಳು ಐಎಎಸ್ ಅಧಿಕಾರಿಯಾಗಬೇಕು ಎನ್ನುವುದು ನಮ್ಮ ಮೊದಲಿನ ಆಸೆಯೇ ಆಗಿದೆ.
ಎಸ್ಸೆಸ್ಸೆಲ್ಸಿ ಇದ್ದಾಗಲೇ ಸುಮಾರು ಏಳು ಚಿತ್ರಗಳಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಅವೆಲ್ಲವನೂ ಒಪ್ಪಿಕೊಳ್ಳಲಿಲ್ಲ. ಖಾಸಗಿ ಟ್ಯೂಷನ್ ಇಲ್ಲದೇ ಈ ಸಾಧನೆ ಮಾಡಿರುವ ಅವಳು ಮೊದಲ ಆದ್ಯತೆ ವಿದ್ಯಾಭ್ಯಾಸಕ್ಕೆ ನೀಡಿದ್ದಾಳೆ~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.