ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುಗುವ ಭೂಮಿಯಲ್ಲೇ ನಡೆದರು...

Last Updated 19 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮಡಿಕೇರಿ:  ‘ಪ್ರಬಲ ಭೂಕಂಪ ಸಂಭವಿಸಿದ ನಂತರ ಪ್ರತಿ ದಿನ 10ರಿಂದ 15 ಬಾರಿ ಭೂಮಿ ಕಂಪಿಸುತ್ತಿತ್ತು. ನಾವು ಅಲ್ಲಿದ್ದ ಐದಾರು ದಿನಗಳಲ್ಲಿ ಸುಮಾರು 100ರಿಂದ 150 ಬಾರಿ ಭೂಮಿ ಕಂಪಿಸತೊಡಗಿತು. ಒಳಗಿದ್ದರೆ ಭೂಕಂಪದ ಭಯ, ಹೊರಗೆ ಹೋಗೋಣವೆಂದರೆ ಅಣು ವಿಕಿರಣ ಸೋರಿಕೆ ಭಯ. ಇದರಿಂದ ಉಸಿರು ಬಿಗಿ ಹಿಡಿದು ಜೀವನ ಸಾಗಿಸಬೇಕಾಯಿತು. ವಿಮಾನವೇರುವ ಐದು ನಿಮಿಷ ಮುನ್ನ ಕೂಡ ಭೂಮಿ ಕಂಪಿಸಿತು. ದೇವರ ದಯೆಯಿಂದ   ಸುರಕ್ಷಿತವಾಗಿ ತವರಿಗೆ ಮರಳಿದ್ದೇವೆ’.

-ಇದು ಮಾರ್ಚ್ 11ರಂದು ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಹಾಗೂ ಸುನಾಮಿಯಿಂದ ತೀವ್ರ ಆಘಾತಕ್ಕೊಳಗಾಗಿ ಟೋಕಿಯೋದಿಂದ ತವರಿಗೆ ವಾಪಸ್ಸಾಗಿರುವ ಕೊಡಗಿನ ಬಲ್ಲಮಾವಟಿಯ ಅಪ್ಪಚೆಟ್ಟೋಳಂಡ ಸೋಮಣ್ಣ ಹಾಗೂ ಪತ್ನಿ ನೇತ್ರಾ ಕಾವೇರಮ್ಮ ಪ್ರತಿಕ್ರಿಯೆ.

ಪತ್ನಿ ನೇತ್ರಾ ಅವರೊಂದಿಗೆ ಸಿಂಗಾಪುರದ ಮೂಲಕ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿ, ಅಲ್ಲಿಂದ ಕಾರಿನಲ್ಲಿ ಶುಕ್ರವಾರ ರಾತ್ರಿ 10.45ಕ್ಕೆ ಬಲ್ಲಮಾವಟಿಯ ತಮ್ಮ ಮನೆ ಮುಂದೆ ಇಳಿದಾಗ ತಂದೆ ಅಪ್ಪಚೆಟ್ಟೋಳಂಡ ಈರಪ್ಪ ಹಾಗೂ ತಾಯಿ ಸುನು ಕಾವೇರಮ್ಮ ಅವರಿಗೆ ಎಲ್ಲಿಲ್ಲದ ಸಂಭ್ರಮ. ಮಗ-ಸೊಸೆಗೆ ಪುನರ್ಜನ್ಮ ಸಿಕ್ಕಿದ ಆನಂದ. 

ವಿಪ್ರೊ ಕಂಪೆನಿಯಿಂದ ಜಪಾನ್‌ನ ಸಿಟಿ ಬ್ಯಾಂಕಿಗೆ ಕನ್ಸಲ್ಟೆಂಟ್ ಆಗಿ ನಿಯೋಜನೆಗೊಂಡಿದ್ದ ಸೋಮಣ್ಣ, ಟೋಕಿಯೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭೂಕಂಪ ಸಂಭವಿಸಿದಾಗ ಕಂಪೆನಿಯ ಕಚೇರಿಯಿರುವ 21ನೇ ಮಹಡಿಯಲ್ಲಿದ್ದರು. ಭೂಕಂಪದಿಂದ ಇಡೀ ಕಟ್ಟಡ ಹಲವು ಬಾರಿ ಅಲುಗಾಡಿದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಹೊರಗೆ ಹೋಗಬೇಡಿ ಎಂದು ವಿನಂತಿಸಿದರೂ ಜೀವ ಉಳಿಸಿಕೊಳ್ಳು ಕೆಳಗೆ ಓಡಿ ಬಂದರು.

ಕಚೇರಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಮನೆಗೆ ಕರೆ ಮಾಡಿದಾಗ ಆ ಕಡೆಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿರಲೇ ಇರಲಿಲ್ಲ. ಇದರಿಂದ ಸೋಮಣ್ಣ ಇನ್ನಷ್ಟು ಆಘಾತಗೊಳ್ಳುವಂತಾಯಿತು. ವಾಹನಗಳ ಓಡಾಟ ಕೂಡ ನಿಂತಿತ್ತು. ಸುಮಾರು ಎರಡು ಗಂಟೆ ಕಾದು ಕುಳಿತ ನಂತರ ರೈಲನ್ನೇರಿ ಮನೆ ಕಡೆ ಪಯಣ ಬೆಳೆಸಿದರು. ಆದರೆ, ನಿಗದಿತ ಸ್ಥಳಕ್ಕಿಂತ ಮೊದಲೇ ರೈಲು ನಿಂತಿತು. ಮನೆ ತಲುಪಲು ಯಾವುದೇ ವಾಹನ ಇಲ್ಲದ್ದರಿಂದ  ಆರೇಳು ಕಿ.ಮೀ. ನಡೆದೇ ಹೋಗಬೇಕಾಯಿತು.

ಅಲುಗಾಡಿದ ಅಪಾರ್ಟ್‌ಮೆಂಟ್:
‘ಭೂಕಂಪ ಸಂಭವಿಸಿದ ನಂತರ ತಾವಿದ್ದ ಅಪಾರ್ಟ್‌ಮೆಂಟ್ ಹಲವು ಬಾರಿ ಅಲುಗಾಡತೊಡಗಿತು. ಇದರಿಂದ ಗಾಬರಿಗೊಂಡ ಪತ್ನಿ ನೇತ್ರಾ ಸ್ನೇಹಿತರಿದ್ದ ಪಕ್ಕದ ಮನೆಗೆ ತೆರಳಿದ್ದರು. ಆದರೆ, ಆ ಮನೆ ಕೂಡ ಕೆಲ ಹೊತ್ತಿನ ನಂತರ ಬಿರುಕು ಬಿಟ್ಟಿದ್ದರಿಂದ ಯಾರಿಗೂ ದಿಕ್ಕೇ ತೋಚದಂತಾಗಿತ್ತು. ಕೊನೆಗೆ ನೆರೆಹೊರೆಯವರು ಸೇರಿ ದೇವರ ಮೇಲೆ ಮೊರೆಯಿಟ್ಟು ಉದ್ಯಾನದಲ್ಲಿ ಬಂದು ಸೇರಿದ್ದರು. ಸಮೀಪದ ಸೂಪರ್ ಮಾರುಕಟ್ಟೆಗೆ ತೆರಳಿ ಸಿದ್ಧಗೊಂಡ ಆಹಾರದ ಪೊಟ್ಟಣಗಳನ್ನು ತಂದು ತಿನ್ನುತ್ತಿರುವ ವೇಳೆಗೆ ಪತ್ನಿಯ ಜತೆಗೂಡಿದೆ. ಇದರಿಂದ ಹೋದ ಜನ್ಮ ಮತ್ತೆ ಬಂದಂತಾಯಿತು’ ಎಂದು ನೆನಪಿಸಿಕೊಳ್ಳುತ್ತಾ ನೆಮ್ಮದಿಯ ನಿಟ್ಟುಸಿರು ಬಿಟ್ಟರು ಸೋಮಣ್ಣ.

ಮತ್ತೆ ಜಪಾನ್‌ಗೆ ಹೋಗುವ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ. ಎಲ್ಲವೂ ಸರಿ ಹೋದ ಮೇಲೆ ನೋಡಬೇಕು’ ಎಂದು ಸೋಮಣ್ಣ ಹೇಳಿದರೆ, ‘ನಾನಂತೂ ಖಂಡಿತಾ ಮತ್ತೆ ಜಪಾನ್‌ಗೆ ಹೋಗುವುದಿಲ್ಲ’ ಎಂದು ಪತ್ನಿ ನೇತ್ರಾ ಕಾವೇರಮ್ಮ ಖಂಡತುಂಡವಾಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT