ಬೆಂಗಳೂರು: `ಮೇ 7ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಪತಿ ಡಾ.ಎನ್. ಪ್ರಭುದೇವ್ ಭರವಸೆ ನೀಡಿದ್ದಂತೆ ಮುಂದೂಡಿದ ಸಭೆಯನ್ನು ಗುರುವಾರ (ಮೇ17) ನಡೆಸಲಿಲ್ಲ~ ಎಂದು ಸಿಂಡಿಕೇಟ್ನ ಐವರು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಂಡಿಕೇಟ್ ಸದಸ್ಯರಾದ ಡಿ.ಎಸ್. ಕೃಷ್ಣ, ಸಿ.ಕೆ.ಜಗದೀಶ್ ಪ್ರಸಾದ್, ಡಾ.ಕೆ.ವಿ.ಆಚಾರ್ಯ, ಟಿ.ಎಚ್. ಶ್ರೀನಿವಾಸಯ್ಯ, ಜಹೀರ್ ಮುಲ್ಲ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ `ಪ್ರಭುದೇವ್ ಕಾಯ್ದೆ ಪ್ರಕಾರ ಆಡಳಿತ ನಡೆಸುತ್ತಿಲ್ಲ~ ಎಂದು ದೂರಿದ್ದಾರೆ.
`ವಿದ್ಯಾರ್ಥಿಗಳು ಮತ್ತು ನೌಕರರಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪರಿಹಾರಕಂಡುಕೊಳ್ಳಬೇಕಿತ್ತು~ ಎಂದಿದ್ದಾರೆ.
`ಪ್ರಭುದೇವ್ ನಿಯಮ ಬಾಹಿರವಾಗಿ ನೇಮಕ ಮಾಡಿಕೊಂಡಿರುವ ಪರೀಕ್ಷಾಧಿಕಾರಿ ಸೈಯದ್ ಜಮಾಲ್, ಹೆಚ್ಚುವರಿ ಕಾನೂನು ಸಲಹೆಗಾರ ಗಂಗಾಧರ್ ಗುರುಮಠ್, ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗಳನ್ನು ರದ್ದು ಮಾಡಬೇಕೆಂದು ವಿ.ವಿ ಶಿಕ್ಷಕೇತರ ನೌಕರರು ಮುಷ್ಕರ ನಡೆಸಿದ್ದರು. ಅವರ ಬೇಡಿಕೆ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಪ್ರಭುದೇವ್ ಅವರು ಸಭೆಯನ್ನೇ ಕರೆಯದೇ ಇರುವುದು ಸರಿಯಲ್ಲ~ ಎಂದು ಹೇಳಿದ್ದಾರೆ.