ಯಶ್ ಚೋಪ್ರಾ ನಿವೃತ್ತಿಯಿಂದ ನಟನಟಿಯರಿಗೆ ತುಂಬಲಾರದ ಹಾನಿಯಾಗಲಿದೆ. ಅವರ ನಿರ್ದೇಶನದಲ್ಲಿ ಅವರ ಮಮತೆ ಹಾಗೂ ವಾತ್ಸಲ್ಯ ಉಣ್ಣದವರು ಜೀವನದಲ್ಲಿ ಬಹು ಅಮೂಲ್ಯವಾದುದನ್ನು ಕಳೆದುಕೊಳ್ಳುತ್ತಾರೆ ಎಂದೆಲ್ಲ ರಾಣಿ ಮುಖರ್ಜಿ ಹೇಳಿದ್ದಾರೆ.
ಯಶ್ ಚೋಪ್ರಾ ನಿರ್ಮಾಣದ ಹಲವಾರು ಚಿತ್ರಗಳಲ್ಲಿ ನಟಿಸಿರುವ ರಾಣಿ, ಅವರ ನಿರ್ದೇಶನದ `ವೀರ್ ಝಾರಾ~ ಚಿತ್ರದಲ್ಲಿಯೂ ನಟಿಸಿದ್ದರು.
`ಯಶ್ಜಿ ಸೆಟ್ನಲ್ಲಿ ಎಲ್ಲ ನಟನಟಿಯರನ್ನು ಪ್ರೋತ್ಸಾಹಿಸುತ್ತಾರೆ. ತಮಗೇನು ಬೇಕು ಎನ್ನುವುದನ್ನು ಯಾವತ್ತಿಗೂ ಸ್ಪಷ್ಟಪಡಿಸುವುದಿಲ್ಲ. ಆದರೆ ನಾವು ಏನು ಕೊಡಬಲ್ಲೆವು ಎಂಬುದನ್ನು ಮಾತ್ರ ಇಡೀ ಸನ್ನಿವೇಶ ವಿವರಿಸಿ ಹೇಳುತ್ತಿದ್ದರು. ನಮ್ಮಳಗೆ ಆ ಪಾತ್ರ ಹುಟ್ಟುವಂತೆ ಮಾಡುತ್ತಿದ್ದರು. ಯಶ್ ನಿರ್ದೇಶನವೆಂದರೆ ಸಹಜವಾದ ನಟನೆಯನ್ನು ಕಲಿಯುವ ಸಂಸ್ಥೆ ಇದ್ದಂತೆ~ ಎಂದು ರಾಣಿ ಮುಖರ್ಜಿ ಮೆಚ್ಚುಗೆಯ ಮಾತುಗಳಿಗೆ ಪೂರ್ಣವಿರಾಮವಿರದಂತೆ ಮಾತನಾಡಿದ್ದಾರೆ.
`ಜಬ್ ತಕ್ ಹೈ ಜಾನ್~ ಚಿತ್ರದ ನಂತರ ನಿರ್ದೇಶಿಸುವುದಿಲ್ಲ ಎಂಬ ಯಶ್ಜಿ ಅವರ ತೀರ್ಮಾನ ಕೇಳಿ ರಾಣಿಗೆ ಬೇಸರವಾಗಿದೆಯಂತೆ.
ಯಶ್ ನಮ್ಮನ್ನು ಯಾವತ್ತಿಗೂ ಮಾನಿಟರ್ ಮೇಲೆ ನೋಡುತ್ತಿರಲಿಲ್ಲ. ನಮ್ಮ ಮುಖಭಾವವನ್ನು ಕ್ಯಾಮೆರಾ ಹಿಂದೆ ನಿಂತು ನಿರುಕಿಸುತ್ತಿದ್ದರು. ಕೆಲವೊಮ್ಮೆ ನಮಗೆ ಸಮಾಧಾನವಾಗದಿದ್ದರೂ ಅವರು ಮಾತ್ರ `ಬಡಿಯಾ ಬೇಟೆ~ ಎಂದೇ ಪ್ರೋತ್ಸಾಹಿಸುತ್ತಿದ್ದರು. ಆ ವಾತ್ಸಲ್ಯಮಯ ನಿರ್ದೇಶನದ ಬಾಂಧವ್ಯ ಎಲ್ಲರೊಂದಿಗೆ ಬೆಳೆಯುವುದಿಲ್ಲ ಎಂದೆಲ್ಲ ರಾಣಿ ಹೇಳಿದ್ದಾರೆ.
ಲಾವಣಿ ಲುಕ್ನ ಐಟಂ ನೃತ್ಯಗಳಲ್ಲಿ ಮಿಂಚುತ್ತಿರುವ ರಾಣಿಗೆ ಮರಾಠಿಗರ ಲಾವಣಿ, ನತ್ತು, ಭೊರಮಾಳದ ಸರ ಇಷ್ಟವಾಯಿತಂತೆ. ಸಾಂಪ್ರದಾಯಿಕ ಹಾಗೂ ಜಾನಪದ ನೃತ್ಯವೊಂದರಲ್ಲಿ ಇಷ್ಟೊಂದು ಗ್ಲಾಮರ್ ಹಾಗೂ ಶೃಂಗಾರ ಅಡಗಿದೆ ಎಂಬುದು `ಅಯ್ಯಾ~ ಚಿತ್ರದಲ್ಲಿ ನಟಿಸಿದ ನಂತರವೇ ತಿಳಿದು ಬಂದಿದೆಯಂತೆ ರಾಣಿಗೆ.