ನರಗುಂದ: ಇಲ್ಲಿಯ ಮಕ್ತುಂಸಾಬ್ ಹೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಇಲಾಖೆ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅವರು ಕೈಗೊಂಡ ಕೆಲಸದ ಬಿಲ್ ಅನ್ನು ಹೆಸ್ಕಾಂ ಪಾವತಿಸದಕ್ಕೆ ಆಕ್ರೋಶಗೊಂಡು ದಿ. ಮಕ್ತುಂಸಾಬ್ ನದಾಫ್ ಕುಟುಂಬದವರು ಸೋಮವಾರ ಉಪವಾಸ ಸತ್ಯಾಗ್ರಹ ಕೈಗೊಂಡು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೃತನ ತಂದೆ ಅಲ್ಲಿಸಾಬ್ ಮಾತನಾಡಿ, ನನ್ನ ಮಗ ವಿದ್ಯುತ್ ಇಲಾಖೆಗಾಗಿ ಗುತ್ತಿಗೆದಾರನಾಗಿ ಸೇವೆ ಸಲ್ಲಿಸುವಾಗ ಸಾವನ್ನಪ್ಪಿ ಎರಡು ವರ್ಷವಾಯಿತು. ಕಂಬ ಹಾಗೂ ಇತರೆ ಕೆಲಸಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದ್ದಾನೆ. ಅದರ ದಾಖಲೆಗಳು ಸಹಿತ ಇವೆ. ಹೆಸ್ಕಾಂ ಅಧಿಕಾರಿಗಳು ಮಾತ್ರ ಹಣ ಪಾವತಿಸಿಲ್ಲ ಎಂದು ದೂರಿದರು.
ಇವರ ಬೆಂಬಲಕ್ಕೆ ಕಳಸಾ ಬಂಡೂರಿ ಹೋರಾಟ ಸಮಿತಿಯ ವಿಜಯ ಕುಲಕರ್ಣಿ, ದಿನಗೂಲಿ ನೌಕರರ ಸಂಘದ ವಿ.ಕೆ.ಮಾಲಿಪಾಟೀಲ, ಲಯನ್ಸ್ ಕ್ಲಬ್ನ ಬಿ.ಎಸ್. ಪಾಟೀಲ, ನಾಗರಾಜ ಉದ್ದನ್ನವರ, ಮಂಜು ಮೆನಸಿನಕಾಯಿ, ವಿರೂಪಾಕ್ಷ ಮಿಕ್ಕಲ್ಲ ಮೊದಲಾದವರು ಬೆಂಬಲ ಸೂಚಿಸಿದರು.
ಸಂಜೆ ತಹಸೀಲ್ದಾರ ಅಶೋಕ ಬದಾಮಿ ಹಾಗೂ ಹೆಸ್ಕಾಂ ಅಧಿಕಾರಿ ಎಂ.ಎ. ಸಗರಿ ಬಂದು ಇವರ ಬೇಡಿಕೆ ಆಲಿಸಿ ಅದನ್ನು ಈಡೇರಿಸುವ ಭರವಸೆ ನೀಡಿದಾಗ ಅದರ ಬಗ್ಗೆ ಲಿಖಿತವಾಗಿ ಕೊಡುವವರೆಗೂ ಸತ್ಯಾಗ್ರಹ ನಿಲ್ಲಿಸುವುದಿಲ್ಲವೆಂದು ಪಟ್ಟು ಹಿಡಿದರು.
ಇದೇ 31ರೊಳಗೆ ತಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.