ಬೆಂಗಳೂರು: `ನದಿಗಳ ಸಂರಕ್ಷಣೆಯ ಮೂಲಕ ದೇಶದ ಸಂಸ್ಕೃತಿಯ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.
ರಾಜಭವನದಲ್ಲಿ ಬುಧವಾರ ನಿಯೋಗಿ ಬುಕ್ಸ್ ಹೊರತಂದಿರುವ ಪದ್ಮಾ ಶೇಷಾದ್ರಿ ಹಾಗೂ ಪದ್ಮಾ ಮಾಲಿನಿ ಸುಂದರರಾಘವನ್ ಅವರ `ಕಾವೇರಿ~ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
`ನದಿಗಳು ಜನ ಜೀವನದ ಅವಿಭಾಜ್ಯ ಅಂಗ. ನದಿಗಳ ಮೂಲಕವೇ ನಮ್ಮ ನಾಗರಿಕತೆ ಉದಯಿಸಿದೆ. ಜೀವಕ್ಕೆ ಆಧಾರವಾದ ನೀರಿನ ಮೂಲಗಳಾದ ನದಿಗಳನ್ನು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಆದರೆ ಆಧುನಿಕತೆಯಿಂದಾಗಿ ನದಿಗಳ ಮಾಲಿನ್ಯ ಹೆಚ್ಚಾಗುತ್ತಿದೆ. ದೇವ ನದಿ ಗಂಗೆ ಮಾಲಿನ್ಯದಿಂದ ಕೊಳಕಾಗಿದೆ.
ಗಂಗಾನದಿ ನೀರಿನಿಂದ ಅನೇಕ ರೋಗಗಳು ಬರುವ ಮಟ್ಟಕ್ಕೆ ಇಂದು ಗಂಗೆ ಕಲುಷಿತಗೊಂಡಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.
`ಮಾಲಿನ್ಯಕ್ಕೆ ತುತ್ತಾಗುತ್ತಿರುವ ಕಾವೇರಿ ನದಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ್ದು ರಾಜ್ಯದ ಎಲ್ಲರ ಜವಾಬ್ದಾರಿ. ಬರಡಾದ ನೆಲಕ್ಕೆ ಜೀವ ಚೈತನ್ಯ ತುಂಬುವ ಅದ್ಭುತ ಶಕ್ತಿ ಇರುವ ನದಿಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯವಿದೆ~ ಎಂದು ಅವರು ನುಡಿದರು.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, `ದಕ್ಷಿಣ ಭಾರತದ ಜನ ಜೀವನದೊಂದಿಗೆ ಕಾವೇರಿ ನದಿಯ ನೇರ ಸಂಬಂಧವಿದೆ. ಇಲ್ಲಿನ ಮುಖ್ಯ ಘಟ್ಟದ ನಾಗರಿಕತೆ ಬೆಳೆದಿರುವುದೇ ಕಾವೇರಿ ನದಿಯ ತಪ್ಪಲಿನಲ್ಲಿ~ ಎಂದರು.
ಪುಸ್ತಕದ ಲೇಖಕಿ ಪದ್ಮಾ ಶೇಷಾದ್ರಿ ಮಾತನಾಡಿ, `ನದಿಗಳ ಸಹಜ ಹರಿವನ್ನೇ ಆಧುನಿಕ ನಾಗರಿಕತೆ ಕಸಿದುಕೊಂಡಿದೆ. ಅಣೆಕಟ್ಟೆಗಳನ್ನು ಕಟ್ಟುವ ಮೂಲಕ ನದಿಗಳು ಸಮುದ್ರ ಸೇರುವಲ್ಲಿನ ಸಹಜ ಪ್ರಕ್ರಿಯೆಗೆ ಅಡ್ಡಿ ಮಾಡಿದಂತಾಗಿದೆ~ ಎಂದರು.
ಪುಸ್ತಕದ ಮತ್ತೊಬ್ಬ ಲೇಖಕಿ ಪದ್ಮಾ ಮಾಲಿನಿ ಸುಂದರರಾಘವನ್, ನಿವೃತ್ತ ಐಎಎಸ್ ಅಧಿಕಾರಿ ಎ.ರಾಮಸ್ವಾಮಿ, ನಿಯೋಗಿ ಬುಕ್ಸ್ನ ಬಿಕಾಶ್ ನಿಯೋಗಿ ಉಪಸ್ಥಿತರಿದ್ದರು. ಪುಸ್ತಕದ ಬೆಲೆ 795 ರೂಪಾಯಿ.