ತುಮಕೂರು: ಹೋರಾಟ ಮಾಡುತ್ತಲೇ ಚುನಾವಣಾ ಕಣಕ್ಕೆ ಬಂದಿರುವ ಸಿಪಿಐ ಅಭ್ಯರ್ಥಿ ವಿ.ಚಿನ್ನಪ್ಪ ಅವರಿಗೆ ಕಾರ್ಮಿಕ ಮುಖಂಡ ಎಂದು ಕರೆಸಿಕೊಳ್ಳಲು ಇಷ್ಟವಂತೆ.
*ಪ್ರಚಾರಕ್ಕೆ ನಿಮ್ಮ ಸಿದ್ಧತೆ?
ಚುನಾವಣೆಯಲ್ಲಿ ಎಡಪಕ್ಷಗಳು ಒಂದಾಗಿವೆ. ಕಾರ್ಯಕರ್ತರ ಸಂಖ್ಯೆ ಹೆಚ್ಚಿದೆ. ಸಂಘಟನೆ ಮುಖಂಡರು ಮನೆಮನೆಗೆ ಭೇಟಿ ನೀಡಲಿದ್ದಾರೆ. ಉಳಿದಂತೆ ಬಹಿರಂಗ ವಾಹನದಲ್ಲಿ ಪ್ರವಾಸ ಮಾಡಲಾಗುವುದು.
*ಮತದಾರರಿಗೆ ನಿಮ್ಮ ಭರವಸೆ?
ಎಲ್ಲ ತಾಲ್ಲೂಕುಗಳಲ್ಲಿಯೂ ಶೀತಲ ಘಟಕ (ಕೋಲ್ಡ್ ಸ್ಟೋರೆಜ್) ಸ್ಥಾಪನೆ, ಜಿಲ್ಲೆಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ತರುವುದು, ಸರ್ಕಾರಿ ಗೋಮಾಳ ರಕ್ಷಣೆ.
*ಏಕೆ ಚುನಾವಣೆಗೆ ಸ್ಪರ್ಧಿಸಿದ್ದೀರಿ ?
ಯುವಕರು, ರೈತರು, ಕಾರ್ಮಿಕರ ಗರಿಷ್ಠ ಮತಗಳನ್ನು ಪಡೆಯುವುದೇ ನಮ್ಮ ಗುರಿ. ಕೋಲ್ಡ್ ಸ್ಟೋರೆಜ್ ಮೂಲಕ ರೈತರಿಗೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮೂಲಕ ಮಧ್ಯಮ ವರ್ಗ, ಕಾರ್ಮಿಕರ ಮಕ್ಕಳಿಗೆ ಅನುಕೂಲ ಕಲ್ಪಿಸುವುದು ನನ್ನ ಲಕ್ಷ್ಯ.
*ನಿಮಗೆ ತಿಳಿದಿರುವಂತೆ ಜಿಲ್ಲೆಯ ಸಮಸ್ಯೆ?
ಜಿಲ್ಲೆಯಲ್ಲಿ ತೆಂಗು ಬೆಳೆಗೆ ನೀರಿಲ್ಲದೆ ಇರುವಂತಹ ಸ್ಥಿತಿ ಇದೆ. ಪರಮಶಿವಯ್ಯ ವರದಿ ಜಾರಿ, ರೈಲ್ವೆ ಸಂಪರ್ಕದಲ್ಲಿಯೂ ಜಿಲ್ಲೆ ಹಿಂದೆ ಉಳಿದಿದೆ. ಕೈಗಾರಿಕಾ ವಲಯಗಳಿದ್ದರೂ ರಾಜಧಾನಿಗೆ ಕೆಲಸಕ್ಕೆ ಹೋಗುವ ಕಾರ್ಮಿಕ ಸಂಖ್ಯೆ ಕಡಿಮೆಯಾಗಿಲ್ಲ. ಪಟ್ಟಿ ಮಾಡುತ್ತ ಹೋದರೆ ಪಟ್ಟಿ ಇನ್ನಷ್ಟು ದೊಡ್ಡದಾಗುತ್ತದೆ.
*ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಿತಿ?
ಜಿಲ್ಲೆಯಲ್ಲಿ ವಿದ್ಯುತ್ ಅಭಾವ ಜಾಸ್ತಿ ಇದೆ. ಉತ್ಪಾದನೆ ಕಡಿಮೆಯಾಗುತ್ತಿದೆ. ಬೆಳ್ಳಾವಿಯಲ್ಲಿದ್ದ ಕೊನಾರ್ಕೋ ವಿದ್ಯುತ್ ಘಟಕವನ್ನು ಇಲ್ಲಿಯೇ ಉಳಿಸಿಕೊಂಡಿದ್ದಿದ್ದರೆ, ಜಿಲ್ಲೆಯಲ್ಲಿ ಇಷ್ಟು ವಿದ್ಯುತ್ ಅಭಾವ ಉಂಟಾಗುತ್ತಿರಲಿಲ್ಲ. ಕೊನಾರ್ಕೋ ಘಟಕ ಉಳಿಸಿಕೊಳ್ಳಲು ಆಗಿನ ಇಂಧನ ಸಚಿವರು ಸಹಕಾರ ನೀಡಲಿಲ್ಲ.
*ಕಾರ್ಮಿಕರಾಗಿ ನಿಮ್ಮ ಹೋರಾಟ?
ಕಟ್ಟಡ ಕಾರ್ಮಿಕ ಮದುವೆಗೆ ₨ 50 ಸಾವಿರ, ವಿದ್ಯಾಭ್ಯಾಸಕ್ಕೆ ಸಹಾಯ, ಆಕಸ್ಮಿಕ ಮರಣ ಹೊಂದಿದ್ದ ಕಾರ್ಮಿಕ ಕುಟುಂಬಗಳಿಗೆ ₨ 1 ಲಕ್ಷ ಸಹಾಯ ನೀಡುವಂತೆ ಮಾಡಿದ್ದು ನನ್ನ ಸಾಧನೆ. ಜಿಲ್ಲೆಯಲ್ಲಿ 3500ಕ್ಕೂ ಹೆಚ್ಚು ಕಾರ್ಮಿಕರನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದು ಅವರಿಗೆ ಭದ್ರತೆ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ.
ವಿ.ಚಿನ್ನಪ್ಪ (59)
ಪಕ್ಷ : ಸಿಪಿಐ
ವಿದ್ಯಾರ್ಹತೆ : ಐಟಿಐ, ಎಟಿಎಸ್
ವಾಸ : ವಕ್ಕೋಡಿ ಗೊಲ್ಲರಹಟ್ಟಿ, ಬೆಳ್ಳಾವಿ ತಾಲ್ಲೂಕು
ವೃತ್ತಿ : ಕಾರ್ಮಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.