ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕಾಲದ ಸಾಂಸ್ಕೃತಿಕ ನಾಯಕ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜಿ.ಎಸ್. ಶಿವರುದ್ರಪ್ಪನವರು ನನಗೆ ಆನರ್ಸ್ ಮತ್ತು ಎಂ.ಎ. ತರಗತಿಗಳಲ್ಲಿ ಐದು ವರ್ಷ ಪ್ರಾಧ್ಯಾಪಕರಾಗಿದ್ದವರು. ಅಂದಿನಿಂದ ಇಂದಿನವರೆಗೆ ನಾಲ್ಕು ದಶಕಗಳ ಕಾಲ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಅವರೊಂದಿಗಿನ ನಿಕಟ ಒಡನಾಟ ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ.

ಅವರದು ಸಮಚಿತ್ತದ ವ್ಯಕ್ತಿತ್ವ. ಯಾವ ಪ್ರಭಾವ, ಪ್ರವಾಹಕ್ಕೂ ತಮ್ಮನ್ನು ಸುಲಭವಾಗಿ ಒಪ್ಪಿಸಿಕೊಂಡವರಲ್ಲ. ಅಂತರವನ್ನು ಕಾಯ್ದುಕೊಳ್ಳುತ್ತ, ಬೇಕಾದ್ದನ್ನು ಸ್ವೀಕರಿಸುತ್ತ, ತನ್ನಂತರಂಗದ ಹಣತೆ ಆರದಂತೆ ಸದಾ ಎಚ್ಚರದಿಂದ ಇದ್ದವರು. ಎಂತಹ ಒತ್ತಡದ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳದೆ, ಲಘುವಾಗದೆ ಸಾಮಾಜಿಕ ಬದುಕಿನ ಘನತೆಯನ್ನು ಎತ್ತಿ ಹಿಡಿದವರು.

ಪರಂಪರೆ ಮತ್ತು ಆಧುನಿಕತೆ ಇವೆರಡರ ಬಗೆಗೂ ಜಿಎಸ್ಎಸ್ ಅವರಿಗೆ ಸಮಾನ ಪ್ರೀತಿ, ಗೌರವ. ಹೀಗಾಗಿಯೇ ಅವರ ವ್ಯಕ್ತಿತ್ವದಲ್ಲಿ ಹಿರಿಯರ ಬಗ್ಗೆ ಗೌರವ, ಕಿರಿಯರ ಬಗ್ಗೆ ಪ್ರೀತಿ ಸಹಜವೆಂಬಂತೆ ಸೇರಿಕೊಂಡಿತ್ತು. ಹಿರಿಯರ ಅನುಭವ, ವಿವೇಕ, ಕಿರಿಯರ ಉತ್ಸಾಹ, ಹೊಸ ಚಿಂತನೆ ಇವೆರಡನ್ನೂ ಒಂದೇ ಕಡೆ ತರುವ ಅವರ ಪ್ರಯತ್ನ ನಮ್ಮ ಕಾಲದ ಒಂದು ಆದರ್ಶ ಮಾದರಿ. ಸಾಹಿತ್ಯ, ಸಾಂಸ್ಕೃತಿಕ ವಾಗ್ವಾದಗಳು ವೈಯಕ್ತಿಕ ನಿಂದೆ, ಜಗಳವಾಗಿ ಬಿಡುತ್ತಿರುವ ಅಪಾಯದ ಪರಿಸರದಲ್ಲಿ ಭಿನ್ನ ವ್ಯಕ್ತಿತ್ವದ ಭಿನ್ನ ತಲೆಮಾರಿನ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ಸಂವಾದಕ್ಕೆ ಅಗತ್ಯವಾದ ಸನ್ನಿವೇಶ, ವಾತಾವರಣ ನಿರ್ಮಿಸಿದ ಅವರ ಪ್ರಯತ್ನ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ್ದು.

ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಅವರು ಸಂಘಟಿಸಿದ ವಿಚಾರ ಸಂಕಿರಣಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಅವರು ರೂಪಿಸಿದ ಯೋಜನೆಗಳು ಕನ್ನಡ ಸಂಸ್ಕೃತಿಯನ್ನು ಚಲನಶೀಲವಾಗಿ, ಜೀವಂತವಾಗಿ ಇಡುವ ಸಾರ್ಥಕ ಪ್ರಯತ್ನಗಳು. ಅವರ ಈ ಸಾಂಸ್ಕೃತಿಕ ವ್ಯಕ್ತಿತ್ವ ಶಿವರುದ್ರಪ್ಪನವರ ಸೃಜನಶೀಲತೆಯ ಒಂದು ಪ್ರಧಾನ ಅಂಶವಾಗಿದೆ. ಆರೋಗ್ಯಕರ ಸಮಾಜ ರೂಪಿಸುವಲ್ಲಿ, ಸಂಸ್ಕೃತಿ ನಿರ್ಮಾಣದಲ್ಲಿ ಅವರು ಕಳೆದ ಆರು ದಶಕಗಳಲ್ಲಿ ನಿರ್ವಹಿಸಿದ ಪಾತ್ರ ಕನ್ನಡ ಸಂಸ್ಕೃತಿ ಚರಿತ್ರೆಯ ಉಜ್ವಲ ಅಧ್ಯಾಯ.

‘ಸಾಹಿತ್ಯ ಎನ್ನುವುದು ಮೂಲಭೂತವಾಗಿ ಬದುಕನ್ನು ಅಂದಂದಿನ ಲೇಖಕರು ಗ್ರಹಿಸುವ ಹಾಗೂ ವ್ಯಾಖ್ಯಾನಿಸುವುದರ ಮೂಲಕ ಸಾಧಿಸಿದ ಜೀವನ ಪ್ರೀತಿಯ ವಿಸ್ತರಣೆ ಎಂದು ನಾನು ಭಾವಿಸಿದ್ದೇನೆ. ನಾನಾ ವಿಚ್ಛಿದ್ರಕಾರಕ ಶಕ್ತಿಗಳ ನಡುವೆ ಸಾಹಿತ್ಯ ನಮ್ಮನ್ನು ಕೂಡಿಸದೆ ಹೋದರೆ ಮತ್ತೆ ಇನ್ಯಾವುದು ತಾನೇ ಕೂಡಿಸೀತು? ಸಾಹಿತ್ಯ ಜೀವನ ಪ್ರೀತಿಯ ವಿಸ್ತರಣೆ ಮಾತ್ರವಲ್ಲ, ಮಾನವೀಯ ಸಂಬಂಧಗಳ ವಿಸ್ತರಣೆ ಕೂಡ’. ಸಾಹಿತ್ಯವನ್ನು ಕುರಿತಂತೆ ಜಿಎಸ್ ಶಿವರುದ್ರಪ್ಪನವರ ಖಚಿತ ನಂಬಿಕೆಯಿದು. ತಮ್ಮ ಅರ್ಧ ಶತಮಾನದ ಸಾಹಿತ್ಯ–ಬದುಕಿನುದ್ದಕ್ಕೂ ಈ ನಿಲವನ್ನು ಅವರು ಅಚಂಚಲ ಮನೋಭಾವದಿಂದ, ಏಕನಿಷ್ಠೆಯಿಂದ ಪ್ರತಿಪಾದಿಸುತ್ತ ಬಂದಿದ್ದಾರೆ. ಮಾನವೀಯ ಸಂಬಂಧಗಳನ್ನು ಹದಗೆಡಿಸುವ ಎಲ್ಲ ಬಗೆಯ ಕುತಂತ್ರಗಳನ್ನೂ, ಸಣ್ಣತನಗಳನ್ನೂ ತೀವ್ರವಾಗಿ ವಿರೋಧಿಸುತ್ತ ಸಾಹಿತ್ಯ ಜೀವನ ಪ್ರೀತಿಯ ಅಭಿವ್ಯಕ್ತಿಯೆಂದು ಕಾವ್ಯರಚನೆ ಮಾಡುತ್ತ ಬಂದಿದ್ದಾರೆ.

ಪ್ರೀತಿ ಇಲ್ಲದ ಮೇಲೆ
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ  ಜೊತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?
ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕೂ
ಸಿಡಿಗುಂಡುಗಳ ಕವನ ನಿಂತೀತು ಹೇಗೆ?
ಜಾತಿ–ಮತ–ಭಾಷೆ ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ–ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?


ಪ್ರೀತಿ ಎಂಬ ಮೌಲ್ಯ ಶಿವರುದ್ರಪ್ಪನವರ ಬದುಕನ್ನು ರೂಪಿಸಿರುವ ಜೀವನ– ಶ್ರದ್ಧೆಯೂ ಹೌದು, ಅವರ ಕಾವ್ಯದ ತಾತ್ವಿಕ ನೆಲೆಗಟ್ಟೂ ಹೌದು.
ದೇವರು ಧರ್ಮ ವಿಧಿ ಕರ್ಮ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಾಸ್ತವವನ್ನು ಯಥಾವತ್ತಾಗಿ ಒಪ್ಪಿಕೊಳ್ಳುವ, ಗ್ರಹಿಸುವ ಹಾಗೂ ಎದುರಿಸುವ ಧೈರ್ಯವನ್ನು ಮೈಗೂಡಿಸಿಕೊಳ್ಳುವುದು, ಬದುಕಿನ ಅನುಭವಗಳನ್ನು ಶೋಧಿಸುತ್ತ ಅರಿವಿನ ಪರಿಧಿಯನ್ನು ವಿಸ್ತರಿಸುವುದು ಇವೇ ನಿಜವಾದ ಜೀವನ ಧರ್ಮಗಳೆಂದು ಪರಿಭಾವಿಸಿದ್ದ ಜಿಎಸ್ಎಸ್ ಆ ಹಿನ್ನೆಲೆಯಲ್ಲಿಯೇ ತಮ್ಮ ಕಾವ್ಯದ ಸ್ವರೂಪವನ್ನು ರೂಪಿಸಿಕೊಂಡವರು.

ಅವರೇ ಹೇಳಿಕೊಂಡಿರುವಂತೆ ಕಾವ್ಯ ಮತ್ತು ಸಾಹಿತ್ಯ ವಿಮರ್ಶೆ ಅವರ ಆಸಕ್ತಿಯ ಎರಡು ಪ್ರಧಾನ ವಲಯಗಳು. ಅವರು ನಮ್ಮ ಪ್ರಮುಖ ಕವಿಯಾಗಿರುವಂತೆಯೇ ನಮ್ಮ ಮಹತ್ವದ ವಿಮರ್ಶಕರೂ ಹೌದು. ವಿಮರ್ಶೆ ಮತ್ತು ಮೀಮಾಂಸೆ ಈ ಎರಡೂ ಕ್ಷೇತ್ರಗಳಲ್ಲಿ ಇವರ ಕೊಡುಗೆ ಗಮನಾರ್ಹ.

ಸಾಹಿತ್ಯ ನಿರ್ಮಿತಿ ಎನ್ನುವುದು ತನ್ನ ವರ್ತಮಾನದ ಸಮಕಾಲೀನ ಅನುಭವಗಳ ನೆಲೆಯಲ್ಲಿ ನಿಂತು ಸೃಜಲಶೀಲ ಮನಸ್ಸು ತನ್ನ ಹಿಂದಿನ ಪರಂಪರೆಯೊಂದಿಗೆ ಏರ್ಪಡಿಸಿಕೊಳ್ಳುವ ಸಂಬಂಧ ಹಾಗೂ ಪ್ರತಿಕ್ರಿಯೆಗಳ ಪರಿಣಾಮವಾಗಿದೆ. ಹೀಗಾಗಿ ನಿಜವಾದ ಸಾಹಿತ್ಯ ವಿಮರ್ಶೆ ಪರಂಪರೆಯ ಅರಿವು ಮತ್ತು ಅನುಸಂಧಾನದಿಂದ ನಡೆಯಬೇಕಾದ ಕ್ರಿಯೆ–ಎಂದು ಜಿಎಸ್ಎಸ್ ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ  ಅವರ ಸಮಗ್ರ ವಿಮರ್ಶಾ ಸಾಹಿತ್ಯವನ್ನು ಗಮನಿಸಿದಾಗ ಅದು ‘ಕನ್ನಡ ಪರಂಪರೆ’ಯನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಕಾಣಿಸುತ್ತದೆ. ‘ಕನ್ನಡ ಪರಂಪರೆಯ ಚರಿತ್ರೆ’ಯನ್ನು ತಮ್ಮ ವಿಮರ್ಶೆಯ ಮೂಲಕ ಬರೆದಂತೆ ತೋರುತ್ತದೆ.

ನಮ್ಮ ಕಾವ್ಯ ಚರ್ಚೆ ಬಹುಮಟ್ಟಿಗೆ ಭಾರತೀಯ ಹಾಗೂ ಪಾಶ್ಚಾತ್ಯ ಕಾವ್ಯ ಮೀಮಾಂಸೆಗಳನ್ನು ಅವಲಂಬಿಸಿಯೇ ರೂಪುಗೊಂಡಿದೆ. ಕನ್ನಡ ಭಾಷೆಗೆ ಅದರದೇ ಆದ ಸಾಹಿತ್ಯ ಮೀಮಾಂಸೆ ಇದೆಯೇ?– ಇದು ಈಗ ಪ್ರಶ್ನೆಯಲ್ಲ, ಇದೆ ಎಂಬ ಖಚಿತ ನಿಲವು ಸ್ಥಾಪಿತವಾಗಿದೆ. ಕನ್ನಡ ಕಾವ್ಯಮೀಮಾಂಸೆಯನ್ನು ರೂಪಿಸುವಲ್ಲಿ ಜಿಎಸ್ಎಸ್ ಅವರ ಕೊಡುಗೆ ಮಹತ್ವದ್ದು. ಕನ್ನಡ ಕವಿಗಳ ಕಾವ್ಯಕಲ್ಪನೆಯನ್ನು ವಿವರಿಸುತ್ತ, ಕನ್ನಡ ಕಾವ್ಯಪರಂಪರೆಯಲ್ಲಿ ಅಂತರ್ಗತವಾಗಿರುವ ಕಾವ್ಯಮೀಮಾಂಸೆಯನ್ನು ಶಿವರುದ್ರಪ್ಪನವರು ಗುರ್ತಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯದ ಸ್ವರೂಪ ಮತ್ತು ಕಾವ್ಯಚಿಂತನೆ ನಿಸ್ಸಂದೇಹವಾಗಿ ವಿಶಿಷ್ಟವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಎಂಬತ್ತೇಳು ಸಾರ್ಥಕ ವಸಂತಗಳನ್ನು ಕಳೆದು, ನಾಡಿನ ಸಾಮಾಜಿಕ ಸಾಂಸ್ಕೃತಿಕ ಪಲ್ಲಟಗಳಿಗೆ ಸಾಕ್ಷಿಯಾಗಿ, ಎಲ್ಲವನ್ನೂ ಎಚ್ಚರದಿಂದ ಗಮನಿಸುತ್ತ ತೆರೆದ ಮನಸ್ಸಿನವರಾಗಿ ಇತ್ಯಾತ್ಮಕವಾದುದನ್ನು ಒಳಗೊಳ್ಳುತ್ತ ತಮ್ಮ ಸೃಜನಶೀಲ ಚಟುವಟಿಕೆಗಳಿಂದ ಕನ್ನಡ ಸಂಸ್ಕೃತಿಯನ್ನು ಚಲನಶೀಲವಾಗಿಟ್ಟಿದ್ದ ಶಿವರುದ್ರಪ್ಪನವರು ನಮ್ಮ ಕಾಲದ ಸಾಂಸ್ಕೃತಿಕ ನಾಯಕರಾಗಿದ್ದವರು. ಇಂಥ ನನ್ನ ಗುರುಗಳಿಗೆ ನುಡಿನಮನದ  ಶ್ರದ್ಧಾಂಜಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT