ಉತ್ತರ ಭಾಗದ ಸುವರ್ಣಸೌಧ ಗಣ್ಯಾತಿಗಣ್ಯರಿಂದ ಉದ್ಘಾಟನೆಗೊಂಡಿತು. ಎಲ್ಲಾ ಜನಪ್ರತಿನಿಧಿಗಳು ಹಾಜರಿದ್ದರು. ಪ್ರಚಾರ ಸಹ ಗಿಟ್ಟಿಸಿಕೊಂಡರು.
ಈ ರೀತಿಯ ಒಗ್ಗಟ್ಟನ್ನು ಕಾವೇರಿ ವಿಷಯದಲ್ಲಿ ತೋರಿದ್ದರೆ ನೀರು ಉಳಿಯಬಹುದಿತ್ತು. ಕುಡಿಯಾಕ ನೀರಿಲ್ಲಾ, ಊರಾಗ ಕರೆಂಟಿಲ್ಲಾ, ದುಡಿಯಲಿಕ್ಕಾ ಕೆಲ್ಸ ಇಲ್ಲಾ, ಬರಗಾಲ ಐತಿ, ಸರ್ಕಾರದವ್ರ ಇದ್ರು ಇಲ್ದಂಗ್ ಇದಾರೆ, ದವಸಧಾನ್ಯಗಳ ಬೆಲೆ ಗಗನಕ್ಕೇರಿದೆ,
3 ತಿಂಗಳಿಗೆ ಒಂದ್ಸಲ ಪಡಿತರ ಚೀಟಿ ಬದಲಿಸ್ತಾರೆ, ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ, ಜನಪರ ಯೋಜನೆಗಳೆ ನಮ್ಮ ಕನಸು ಎಂದು ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ? ರಸ್ತೆಗಳು ಹದಗೆಟ್ಟಿವೆ. ಮಹಿಳೆಯರ ಬಗ್ಗೆ ಧ್ವನಿ ಎತ್ತುವ ನಿಮಗೆ ಮಹಿಳೆಯರಿಗೆ ಊರಲ್ಲಿ ಶೌಚಾಲಯಗಳಿಲ್ಲ ಎಂಬುದು ತಿಳಿದಿದೆಯೆ?
ನಮ್ಮ ಉತ್ತರ ಕರ್ನಾಟಕದವರ ನಿತ್ಯದ ಗೋಳು, ಸ್ವಾತಂತ್ರ್ಯ ಪಡೆದು 65 ವರ್ಷಗಳಾದ್ರು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾದ ಕುಟುಂಬಗಳಿವೆ. ಬೆಲೆ ಏರಿಕೆಯಿಂದ ಜನ ತತ್ತರರಾಗಿದ್ದಾರೆ, ರಾಜ್ಯದ ವಿರೋಧ ಪಕ್ಷಗಳು ಏನು ಮಾಡುತ್ತಿವೆ? ಕೇಂದ್ರದ ನಾಲ್ಕೂ ಸಚಿವರು ಎಲ್ಲಿದ್ದಾರೆ, ವಿದೇಶ ಪ್ರವಾಸ ಮುಗಿಸಿಬಂದ ಶಾಸಕರು ಏನು ಅಭಿವೃದ್ಧಿ ಮಾಡುವ ಕ್ರಮ ಕೈಗೊಂಡಿದ್ದಾರೆ?