ಮೈಸೂರು: ಎಚ್.ಡಿ. ಕೋಟೆ ತಾಲ್ಲೂಕಿನ ಚಿಕ್ಕಬರಗಿ ಗ್ರಾಮದ ಬಳಿ ಅರಣ್ಯದಲ್ಲಿ ನರಭಕ್ಷಕ ಹುಲಿ ಮಂಗಳವಾರ ದನಗಾಹಿಯೊಬ್ಬರನ್ನು ತಿಂದಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಒಂದು ವಾರದಲ್ಲಿ ನರಭಕ್ಷಕ ಹುಲಿಗಳಿಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.
ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ದನ ಕಾಯುತ್ತಿದ್ದ ಚಿಕ್ಕಬರಗಿ ಗ್ರಾಮದ ಶಿವಮಲ್ಲಪ್ಪ ಬಸಪ್ಪ (60) ಹುಲಿಗೆ ಬಲಿಯಾದ ದುರ್ದೈವಿ. ಇದೇ ಹುಲಿ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಈ ಮುನ್ನ ಇಬ್ಬರನ್ನು ತಿಂದು ಹಾಕಿತ್ತು.
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಎರಡು ನರಭಕ್ಷಕ ಹುಲಿಗಳಿವೆ. ಇದರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಅರಣ್ಯ ಪಾಲಕ ಸುರೇಶ್ ಎಂಬುವವರನ್ನು ಕೊಂದು ಹಾಕಿದ ಹುಲಿ ಮತ್ತು ಎಚ್.ಡಿ. ಕೋಟೆ ಅರಣ್ಯದಲ್ಲಿ ನರಭಕ್ಷಕ ಹುಲಿ ಎರಡೂ ಬೇರೆ ಬೇರೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ.
ಆಕ್ರೋಶ: ಘಟನೆಯಿಂದ ರೊಚ್ಚಿಗೆದ್ದ ಚಿಕ್ಕಬರಗಿ ಗ್ರಾಮಸ್ಥರು ಯಡಿಯಾಲ ಅರಣ್ಯ ವಲಯ ಕಚೇರಿ ಅತಿಥಿ ಗೃಹದ ಮೇಲೆ ದಾಳಿ ಮಾಡಿ ಕಿಟಕಿಯ ಗಾಜು ಮತ್ತು ವಾಹನಗಳನ್ನು ಜಖಂಗೊಳಿಸಿದರು. ಹುಲಿ ಯೋಜನೆಗೆ ಸೇರಿದ ವಾಹನವೊಂದಕ್ಕೆ ಬೆಂಕಿ ಹಚ್ಚಿದರು ಎಂದು ವರದಿಯಾಗಿದೆ.