ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಗ್ ಮೇಲೆ 4 ವರ್ಷ ನಿಷೇಧ

ಒಲಿಂಪಿಕ್ಸ್‌ನಿಂದ ಹೊರಬಿದ್ದ ಕುಸ್ತಿಪಟು
Last Updated 19 ಆಗಸ್ಟ್ 2016, 20:32 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ (ಪಿಟಿಐ): ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಅವರಿಗೆ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ.  ಇದರಿಂದಾಗಿ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.

ರಿಯೊ ಡಿ ಜನೈರೊದಲ್ಲಿ  ಗುರು ವಾರ ರಾತ್ರಿ (ಭಾರತೀಯ ಕಾಲಮಾನದ ಪ್ರಕಾರ) ಕ್ರೀಡಾ ನ್ಯಾಯಾಲಯವು ಈ ತೀರ್ಪು ನೀಡಿದೆ. ಒಲಿಂಪಿಕ್ಸ್‌ನ ಪುರುಷರ ಫ್ರೀಸ್ಟೈಲ್‌ ಕುಸ್ತಿಯ 74 ಕೆಜಿ ವಿಭಾಗದಲ್ಲಿ  ನರಸಿಂಗ್ ಅವರು ಸ್ಪರ್ಧಿಸಬೇಕಿತ್ತು.  ಕ್ರೀಡಾ ನ್ಯಾಯಾಲಯದ ತೀರ್ಪಿ ನಿಂದಾಗಿ ಅವರು ಈಗ ಸ್ಪರ್ಧಿಸುವಂತಿಲ್ಲ.

ಪ್ರಕರಣದ ಹಿನ್ನೆಲೆ
ಸೋನೆಪತ್ ವಸತಿ ನಿಲಯದಲ್ಲಿ ತರಬೇತಿ ಶಿಬಿರದಲ್ಲಿ ನರಸಿಂಗ್ ಯಾದವ್ ಇದ್ದರು. ಜೂನ್ 25ರಂದು  ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ನಡೆಸಿದ್ದ ಪರೀಕ್ಷೆಯಲ್ಲಿ ಯಾದವ್  ನಿಷೇಧಿತ ಅನಾಬೊಲಿಕ್ ಸ್ಟೈರಾಯ್ಡ್‌ ಸೇವನೆ ಮಾಡಿದ್ದು ಸಾಬೀತಾಗಿತ್ತು. ಅವರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು.

ವಸತಿ ನಿಲಯದ ಇಬ್ಬರು ಕಿರಿಯ ಕುಸ್ತಿಪಟುಗಳು ತಮ್ಮ ಪಾನೀಯದಲ್ಲಿ ಉದ್ದೀಪನ ಮದ್ದು ಬೇರೆಸಿ ಪಿತೂರಿ ಮಾಡಿದ್ದಾರೆ ಎಂದು ನರಸಿಂಗ್ ದೂರಿದ್ದರು. ಪೊಲೀಸರಿಗೂ ದೂರು ಸಲ್ಲಿಸಿದ್ದರು.  ಭಾರತ ಕುಸ್ತಿ ಫೆಡರೇಷನ್ ಅವರ ಬೆಂಬಲಕ್ಕೆ ನಿಂತಿತ್ತು.

ಅದಾಗಿ ಎರಡು ವಾರಗಳ ನಂತರ ನಡೆದ ವಿಚಾರಣೆಯಲ್ಲಿ ನರಸಿಂಗ್ ಅವರನ್ನು ನಾಡಾ ನಿರ್ದೋಷಿ ಎಂದು ಘೋಷಿಸಿತ್ತು. ರಿಯೊ ಒಲಿಂಪಿಕ್ಸ್‌ಗೆ ತೆರಳಲು ಅನುಮತಿಯೂ ಲಭಿಸಿತ್ತು. ವಿಶ್ವ ಕುಸ್ತಿ ಫೆಡರೇಷನ್ ಕೂಡ  ಅವರಿಗೆ ಹಸಿರು ನಿಶಾನೆ ತೋರಿತ್ತು.  ವಾಡಾ (ವಿಶ್ವ ಉದ್ದೀಪನ ಮದ್ದು ತಡೆ ಘಟಕ) ಮಾತ್ರ ತನ್ನ ನಿರ್ಧಾರವನ್ನು ಪ್ರಕಟಿಸಿರಲಿಲ್ಲ.  ಹೋದ ವಾರ ಅವರು ರಿಯೊಗೆ ಬಂದಿಳಿದಿದ್ದರು ಅಭ್ಯಾಸವನ್ನೂ ಆರಂಭಿ ಸಿದ್ದರು.  ನಾಲ್ಕು ದಿನಗಳ ಹಿಂದಷ್ಟೆ ವಾಡಾ ಕ್ರೀಡಾ ನ್ಯಾಯಾಲಯದಲ್ಲಿ ನಾಡಾ ತೀರ್ಪಿನ ವಿರುದ್ಧ ಮನವಿ ಸಲ್ಲಿಸಿತ್ತು. ಇದೀಗ ನಾಡಾ ಮತ್ತು ಡಬ್ಲ್ಯುಎಫ್‌ಐ ನರಸಿಂಗ್ ಪರ ನಿಲುವಿಗೆ ಸೋಲುಂಟಾಗಿದೆ.

ಟ್ರಯಲ್ಸ್ ವಿವಾದ: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ನ 74 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ   ನರಸಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿ ದ್ದರು. ಗಾಯದ ಕಾರಣದಿಂದ ಒಲಿಂಪಿ ಯನ್ ಸುಶೀಲ್ ಕುಮಾರ್ ಈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ  ಭಾಗವಹಿಸಿರಲಿಲ್ಲ.

ಲಂಡನ್ ಒಲಿಂಪಿಕ್ಸ್ ಪದಕವಿಜೇತ ಸುಶೀಲ್  ಅವರು 74 ಕೆಜಿ ವಿಭಾಗದಲ್ಲಿ  ಭಾಗವಹಿಸುವ ಸ್ಪರ್ಧಿಯನ್ನು  ಟ್ರಯಲ್ಸ್ ಮೂಲಕ ಆಯ್ಕೆ ಮಾಡಬೇಕು. ತಮ್ಮ ಹಾಗೂ ನರಸಿಂಗ್ ನಡುವಣ ಟ್ರಯಲ್ಸ್   ನಡೆಸಬೇಕು ಎಂದು ಒತ್ತಾಯಿಸಿದ್ದರು. ಆದರೆ,  ಡಬ್ಲ್ಯು ಎಫ್‌ಐ ಒಪ್ಪಿರಲಿಲ್ಲ. ಆದ್ದರಿಂದ ನರಸಿಂಗ್ ರಿಯೊಗೆ ತೆರಳುವುದು ಖಚಿತವಾಗಿತ್ತು.

ಮೋದಿಗೆ ಮೊರೆ: ಈ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುವುದಾಗಿ ಯಾದವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT