ಹಳೇಬೀಡು: ಇಲ್ಲಿಗೆ ಸಮೀಪದ ನರಸೀಪುರ ಬೋವಿ ಕಾಲೊನಿಯಲ್ಲಿ ಹಲವು ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದು ನಾಲ್ಕು ಮಂದಿಗೆ ಕಾಲರಾ ಇರುವುದು ದೃಢಪಟ್ಟಿದೆ.
`ವಾಂತಿಭೇದಿಯಿಂದ ತೀವ್ರವಾಗಿ ಅಸ್ವಸ್ಥರಾಗಿದ್ದ ನಾಲ್ವರನ್ನು ಕೆಲ ದಿನ ಹಿಂದೆಯೇ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಕಾಲರ ಇರುವುದು ದೃಢಪಟ್ಟಿದೆ ಎಂದು ಗುರುವಾರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕುಡಿಯುವ ನೀರಿನ ಪಂಪ್ಸೆಟ್ ದೂರದಲ್ಲಿರುವುದರಿಂದ ಗ್ರಾಮದ ಜನತೆ ಸಮರ್ಪಕವಾಗಿ ನೀರು ಪೂರೈಕೆಯಾಗದೆ ಚರಂಡಿಗಳಲ್ಲಿ ನಲ್ಲಿ ಹಾಕಿಕೊಂಡು ನೀರು ಪಡೆಯುತ್ತಿದ್ದರು. ಗ್ರಾಮದಲ್ಲಿ ಚಂರಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಹಲವು ಬೀದಿಯಲ್ಲಿ ಕೊಚ್ಚೆ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಗ್ರಾಮದಲ್ಲಿ ಸ್ವಚ್ಛತೆಯ ಕೊರತೆ ಇರುವುದೂ ರೋಗ ಹರಡಲು ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಧಿಕಾರಿಗಳ ಭೇಟಿ: ಅಧಿಕಾರಿಗಳ ದಂಡು ಗ್ರಾಮಕ್ಕೆ ಭೇಟಿ ನೀಡಿದೆ. ಡಿಎಚ್ಒ ಭೀಷ್ಮಾಚಾರಿ, ಜಿಲ್ಲಾ ಆರೋಗ್ಯ ಸರ್ವೇಕ್ಷಣ ಅಧಿಕಾರಿ ಡಾ. ಹೇಮಲತಾ, ಟಿಎಚ್ಒ ಸಂಧ್ಯಾ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ಸುಧಾರಣಾ ಕ್ರಮ ಕೈಗೊಂಡಿದ್ದಾರೆ. ಕಾಯಿಸಿದ ನೀರು ಹಾಗೂ ಶುದ್ಧ ಆಹಾರ ಸೇವನೆ ಮಾಡಬೇಕು. ತಮ್ಮ ವಾಸದ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಜನರಿಗೆ ಜಾಗೃತಿ ಮೂಡಿಸಿದ್ದಾರೆ.