ನೆಲಮಂಗಲ: ಪಟ್ಟಣದ ಸುಭಾಷ್ ನಗರದ ಮನೆಗಳ ನಲ್ಲಿಗಳಲ್ಲಿ ಕಸ ತುಂಬಿದ ದುರ್ವಾಸನೆಯಿಂದ ಕೂಡಿದ ನೀರು ಬಂದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಪುರಸಭೆಯಿಂದ ಪೂರೈಕೆಯಾಗುವ ನೀರಿನಲ್ಲಿ ಪಾರಿವಾಳದ ಪುಕ್ಕಗಳು, ಸಣ್ಣ ಸಣ್ಣ ಮಾಂಸದ ತುಂಡುಗಳು ಬಂದಿವೆ ಎಂದ ಸ್ಥಳೀಯ ನಿವಾಸಿಗಳು ಆಕ್ರೋಶದಿಂದ ನುಡಿದರು.
ನಿವಾಸಿ ಶಿವಲಿಂಗಯ್ಯ ಅವರು ಈ ಬಗ್ಗೆ ಮಾತನಾಡಿ, ‘ನೀರು ಪೂರೈಸುವ ಓವರ್ಹೆಡ್ ಟ್ಯಾಂಕ್ನ್ನು ಪುರಸಭೆಯವರು ಸ್ವಚ್ಛ ಗೊಳಿಸುವುದಿಲ್ಲ. ಮೇಲೆ ಅದನ್ನು ಮುಚ್ಚುವ ಬದಲು ಅದನ್ನು ತೆರದೆ ಇಟ್ಟಿದ್ದಾರೆ ಹೀಗಾಗಿ ಪಕ್ಷಿಗಳು, ಇಲಿಗಳು ಅಲ್ಲಿ ಸತ್ತು ಬೀಳುತ್ತಿವೆ. ಅದು ಕೊಳೆತು ನಮ್ಮ ಮನೆಗಳ ನಲ್ಲಿಗಳಲ್ಲಿ ಬರುತ್ತಿವೆ’ ಎಂದರು.
ಮತ್ತೊಬ್ಬ ನಿವಾಸಿ ರವಿಶಂಕರ್ ಮಾತನಾಡಿ, ‘ನಮ್ಮ ಮನೆಯ ತೊಟ್ಟಿಗಳನ್ನೆಲ್ಲ ಶುದ್ಧ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಈಗಾಗಲೆ ಸಾಂಕ್ರಾಮಿಕ ರೋಗಗಳು ಹೆಚ್ಚಿದ್ದು, ಈ ಕಲುಷಿತ ನೀರನ್ನು ಹೇಗೆ ಬಳಸುವುದು’ ಎಂದು ಪ್ರಶ್ನಿಸಿದರು.