ಹೊಳೆಹೊನ್ನೂರು: `ಭೂಮಿ ಹುಣ್ಣಿಮೆ~ ಹಬ್ಬವನ್ನು ಈ ಭಾಗದಲ್ಲಿ ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.
ಈ ವರ್ಷ ಸುರಿದ ಮಳೆಯಿಂದಾಗಿ ಭದ್ರಾ ಅಣೆಕಟ್ಟು ತುಂಬಿದ್ದು, ಬತ್ತ, ಅಡಿಕೆ, ತೆಂಗು ಮುಂತಾದ ನೀರಾವರಿ ಬೆಳೆಗಳು ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುತ್ತಿವೆ.
ಭೂಮಿಯನ್ನು ಈ ದಿನಗಳಲ್ಲಿ ಗರ್ಭಿಣಿ ಎಂದು ಭಾವಿಸುತ್ತಾ, ಸೀಮಂತ ಮಾಡುವ ಕಾರ್ಯದ ಮೂಲಕ ಸಂಭ್ರಮ ಹಂಚಿಕೊಳ್ಳುವ ಮಹಿಳೆಯರ ಮಾನವೀಯ ಮನೋಭಾವನೆ ಮೆಚ್ಚುವಂತಹದ್ದು. ಭೂಮಿ ತಾಯಿಗೆ ವಿವಿಧ ರೀತಿಯ ಅಲಂಕಾರ ಮಾಡಿ, ಸವಿಯಾದ ಅಡುಗೆ ಮಾಡಿ ಚರಗವನ್ನು ಭೂತಾಯಿಗೆ ಅರ್ಪಿಸುವ ಮೂಲಕ ಕುಟುಂಬ ಸಮೇತ ಸಾಮೂಹಿಕ ಬೋಜನ ಮಾಡಿ ಬಯಕೆ ತೀರಿಸುವ ಪಾರಂಪರಿಕ ಆಚರಣೆಯನ್ನು ಈ ಭಾಗದ ಜನ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.