ವಿಜಾಪುರ: `ನವಜಾತ ಶಿಶುಗಳ ಮೆದುಳು ಬಾವು ಕಡಿಮೆ ಮಾಡುವ ಕ್ರಿಟಿಕೂಲ್ ಯಂತ್ರ, ಮಿದುಳು ಮಾಪಕ ಯಂತ್ರ ಅಳವಡಿಸಿ ಆಧುನಿಕ ಸೇವೆಯನ್ನು ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಒದಗಿಸಿದ ಕೀರ್ತಿ ಡಾ.ಬಿದರಿ ಅವರ ಅಶ್ವಿನಿ ಆಸ್ಪತ್ರೆಗೆ ಸಲ್ಲುತ್ತದೆ~ ಎಂದು ಬೆಳಗಾವಿಯ ಕೆಎಲ್ಇ ಡೀಮ್ಡ ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ.ವಿ.ಡಿ. ಪಾಟೀಲ ಹೇಳಿದರು.
ಇಲ್ಲಿಯ ಬಿದರಿ ಅವರ ಅಶ್ವಿನಿ ಮಕ್ಕಳ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಕ್ರಿಟಿಕೂಲ್ ಯಂತ್ರ, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಂಚಾರಿ ಉಸಿರಾಟ ಯಂತ್ರಗಳನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಗಲಗಲಿ ಮಾತನಾಡಿ, ಶೇ.98 ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಿಯೇ ಆಗು ವಂತೆ ಸರ್ಕಾರದ ವಿವಿಧ ಯೋಜನೆ ಗಳಿಂದ ಸಾಧ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗುತ್ತಿ ಜಂಬುನಾಥ, `ರೂ.20 ಕ್ಷ ವೆಚ್ಚದಲ್ಲಿ ಅಳವಡಿಸಿರುವ ಈ ಯಂತ್ರದ ಸೌಲಭ್ಯ ವನ್ನು ಉಚಿತವಾಗಿ ನೀಡುತ್ತಿರುವ ಡಾ.ಬಿದರಿ ಅಶ್ವಿನಿ ಆಸ್ಪತ್ರೆ ಅಭಿನಂದ ನಾರ್ಹ. ಹೆರಿಗೆ ಸಮಯದಲ್ಲಿ ಆಗುವ ಮೆದುಳು ಬಾವು ತಪ್ಪಿಸಲು ಕೈಕೊಳ್ಳುವ ಯಾವುದೇ ಯೋಜನೆಗೆ ಜಿಪಂನಿಂದ ಎಲ್ಲ ಸೌಲಭ್ಯ ನೀಡಲಾಗುವುದು~ ಎಂದು ಭರವಸೆ ನೀಡಿದರು.
ಡಾ.ಎಲ್.ಎಚ್. ಬಿದರಿ ಮಾತ ನಾಡಿ, ಹೆರಿಗೆ ಸಮಯದಲ್ಲಿ ಮೆದುಳು ಬಾವು ತಡೆಗಟ್ಟಲು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಪ್ರಸೂತಿ ತಜ್ಞರು ಜಿಪಂ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗುವುದು ಎಂದರು.
ನಂತರ ನಡೆದ ನಿರಂತರ ವೈದ್ಯಕೀಯ ಕಾರ್ಯಾಗಾರದಲ್ಲಿ ವಿಜಾಪುರ ಮತ್ತು ನೆರೆಯ ಜಿಲ್ಲೆಗಳ 70 ಜನ ಮಕ್ಕಳ ತಜ್ಞರು, ಪ್ರಸೂತಿ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಪುಣೆ, ಬೆಳಗಾವಿ, ಬೆಂಗಳೂರು, ಗುಲ್ಬರ್ಗದಿಂದ ಆಗಮಿಸಿದ್ದ ಅತಿಥಿ ಉಪನ್ಯಾಸಕರು ಉಪನ್ಯಾಸ ನೀಡಿದರು. ಅಮೆರಿಕೆಯ ಫ್ರೋರಿಡಾದಿಂದ ಡಾ.ಮೈಕಲ್ ವೀಜ್ ಅವರು ವಿಡಿಯೋ ಸಂವಾದ ನಡೆಸಿದರು.