ವಿಜಾಪುರ: ಕೇವಲ ಒಂದು ದಿನದ ನವಜಾತ ಶಿಶುವಿನ ತಲೆಯ ಹಿಂಭಾಗಕ್ಕೆ ಅಂಟಿಕೊಂಡ ದೊಡ್ಡ ಗಂಟನ್ನು ನಗರದ ಸಂಜೀವಿನಿ ಆಸ್ಪತ್ರೆಯ ತಜ್ಞ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿ ಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ಸುನಂದ ಕರೆಪ್ಪ ಪೂಜಾರಿ ಎಂಬುವರಿಗೆ ಜನಿಸಿದ ಒಂದು ದಿನದ ನವಜಾತ ಗಂಡು ಮಗುವಿಗೆ ತಲೆಯ ಬುರುಡೆಯ ಎಲುಬಿನ ರಂಧ್ರದ ಮೂಲಕ ಮೆದುಳು ಹೊರಬಂದು ದೊಡ್ಡ ಗಂಟು ಆಗಿತ್ತು.
ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ `ಎನ್ಕೆಫೆಲೊಸಿಲ್~ ಎನ್ನುತ್ತಾರೆ. ಈ ಗಂಟು ಒಡೆದು ಮಗುವಿನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಒಂದೂವರೆ ಕಿ.ಗ್ರಾಂ. ತೂಕದ ಮಗುವಿನಲ್ಲಿ 400 ಗ್ರಾಂ ತೂಕದ ಗಡ್ಡೆ ಬೆಳೆದಿತ್ತು.
ಬಹು ಅಪರೂಪವಾದ ಈ ಗಂಟನ್ನು ನಗರದ ಸಂಜೀವಿನಿ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಬಾಬು ನ್ಯಾಮಣ್ಣವರ ಹಾಗೂ ಅರಿವಳಿಕೆ ತಜ್ಞ ಡಾ. ಗುರುಲಿಂಗಪ್ಪ ಉಪಾಸೆ ಅವರನ್ನೊಳಗೊಂಡ ತಂಡ ಶಸ್ತ್ರ ಚಿಕಿತ್ಸೆ ನಡೆಸಿ ಗಂಟನ್ನು ಹೊರತೆಗೆಯಿತು. ಮಗು ಸಂಪೂರ್ಣ ಆರೋಗ್ಯದಿಂದ ನಲಿಯುತ್ತಿದೆ ಎನ್ನುತ್ತಾರೆ ಮಗುವಿನ ಪಾಲಕರು.