ಬೆಂಗಳೂರು: ನವ ದಂಪತಿ ಇಲಿ ಪಾಷಾಣ ತಿಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತನೂರು ಸಮೀಪದ ನೂರ್ನಗರದಲ್ಲಿ ಶುಕ್ರವಾರ ನಡೆದಿದೆ. ಶನಿವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದ ಅಫ್ರೋಜ್ ಬೇಗ್ (26) ಮತ್ತು ಹೀನಾ ಫಿರ್ದೋಜ್ (21) ಆತ್ಮಹತ್ಯೆ ಮಾಡಿಕೊಂಡವರು. ಗುಜರಿ ಅಂಗಡಿ ಇಟ್ಟುಕೊಂಡಿದ್ದ ಅಫ್ರೋಜ್, ತಂದೆ, ತಾಯಿ ಹಾಗೂ ಅಣ್ಣಂದಿರ ಜತೆ ಏಳು ವರ್ಷಗಳಿಂದ ನೂರ್ನಗರದಲ್ಲಿ ವಾಸವಾಗಿದ್ದರು. ಎರಡು ತಿಂಗಳ ಹಿಂದಷ್ಟೆ ಚಿಕ್ಕಮ್ಮನ ಮಗಳು ಹೀನಾ ಅವರನ್ನು ಮದುವೆಯಾಗಿದ್ದರು' ಎಂದು ಪೊಲೀಸರು ಹೇಳಿದ್ದಾರೆ.
`ಶುಕ್ರವಾರ ಮಧ್ಯಾಹ್ನ ಕುಟುಂಬ ಸದಸ್ಯರೆಲ್ಲಾ ಸಂಬಂಧಿಕರ ಮನೆಗೆ ತೆರಳಿದ್ದೆವು. ಈ ವೇಳೆ ಮನೆಯಲ್ಲಿ ಅಫ್ರೋಜ್ ಮತ್ತು ಹೀನಾ ಮಾತ್ರ ಇದ್ದರು. ರಾತ್ರಿ ಮನೆಗೆ ಬಂದಾಗ ಅವರ ಕೋಣೆ ಬಾಗಿಲು ಹಾಕಿತ್ತು.
ಮಲಗಿರಬಹುದು ಎಂದುಕೊಂಡು ನಾವು ಸಹ ಊಟ ಮುಗಿಸಿ ಮಲಗಿದೆವು. ಬೆಳಿಗ್ಗೆ ಹತ್ತು ಗಂಟೆಯಾದರೂ ಬಾಗಿಲು ತೆಗೆಯದ ಕಾರಣ ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂತು' ಎಂದು ಅಫ್ರೋಜ್ ಅವರ ಅಣ್ಣ ತಬ್ರೇಜ್ ವಿಚಾರಣೆ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದರು.