ಗಂಗಾವತಿ: ಶೀಥಿಲಾವಸ್ಥೆಯಲ್ಲಿದ್ದ ಗುಂಡಮ್ಮಕ್ಯಾಂಪಿನ ಡೈಲಿ ತರಕಾರಿ ಮಾರುಕಟ್ಟೆಯ ಪುನರ್ ನವೀಕರಣ ಕಾಮಗಾರಿಗೆ ಎಸ್ಎಫ್ಸಿ ಯೋಜನೆಯ 1.05 ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಬುಧವಾರ ಗುಂಡಮ್ಮಕ್ಯಾಂಪಿನಲ್ಲಿರುವ ಡೈಲಿ ಮಾರ್ಕೆಟ್ನಲ್ಲಿ ಕೈಗೊಂಡ ನವೀಕರಣ ಮತ್ತು ಇತರ ಕಾಮಗಾರಿಗಳನ್ನು ಶಾಸಕ ಪರಿಶೀಲಿಸಿದರು. ಬಳಿಕ ನಿರ್ಮಿತಿ ಕೇಂದ್ರದ ಕಿರಿಯ ಎಂಜಿನಿಯರ್ ಗಂಗಾಧರ ಅವರಿಂದ ಮಾಹಿತಿ ಪಡೆದರು.
ತರಕಾರಿ ಮಾರಾಟಗಾರರಿಗೆ ಒಂದೇ ಸೂರಿನಡಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ವ್ಯವಹಾರಕ್ಕೆ ಅನುಕೂಲ ಕಲ್ಪಿಸಿ ಕೊಡಲು ಹಾಗೂ ಗ್ರಾಹಕರಿಗೆ ಉತ್ತಮ ತರಕಾರಿ ದೊರಕಿಸಿ ಕೊಡುವ ಉದ್ದೇಶಕ್ಕೆ ಮಾರುಕಟ್ಟೆಯನ್ನು ಪುನರ್ ನವೀಕರಣ ಮಾಡಲಾಗುತ್ತಿದೆ.
ಸಣ್ಣ ಮತ್ತು ದೊಡ್ಡ ಪ್ರಮಾಣದ ಒಟ್ಟು 80ಕ್ಕೂ ಹೆಚ್ಚು ಅಂಗಡಿಗಳಿಗೆ ಅವಕಾಶವಿದೆ. ಇದೇ ಡಿಸೆಂಬರ್ 15ರೊಳಗೆ ಕಾಮಗಾರಿ ಉದ್ಘಾಟಿಸಿ ತರಕಾರಿ ಮಾರಾಟಗಾರರಿಗೆ ನೀಡಲು ಗುರಿ ಹೊಂದಲಾಗಿದೆ ಎಂದು ಶಾಸಕತಿಳಿಸಿದರು.
ಚರಂಡಿ ಕಾಮಗಾರಿ: ಬಳಿಕ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಕೈಗೊಳ್ಳಲಾದ ಚರಂಡಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕ, ಡಿಸೆಂಬರ್ ಅಂತ್ಯದೊಳಗೆ ರಸ್ತೆಯ ಎರಡು ಕಡೆ 1.5 ಮೀಟರ್ ಅಗಲದ ಚರಂಡಿ, ಪಾದಚಾರಿ ರಸ್ತೆ ನಿರ್ಮಿಸಲಾಗುವುದು.
ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ರೂ, 16 ಕೋಟಿ ಮೊತ್ತದಲ್ಲಿ ರೂ, 1.5 ಕೋಟಿ ಹಣ ಮಹಾತ್ಮಗಾಂಧಿ ವೃತ್ತದಿಂದ ಸಿಬಿಎಸ್ ವರೆಗಿನ ರಸ್ತೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಇನ್ನೂಳಿದ ಹಣ 31 ವಾರ್ಡ್ಗಳ ಮೂಲ ಸೌಕರ್ಯಕ್ಕೆ ಬಳಸಲಾಗುವುದು ಎಂದರು. ಫುಡ್ಬಜಾರ ಕಟ್ಟಡ ತೆರವಾಗದ್ದರಿಂದ ಕುಂಠಿತವಾಗಿರುವ ಚರಂಡಿ ನಿರ್ಮಾಣದ ಬಗ್ಗೆ ಸುದ್ದಿಗಾರರು ಶಾಸಕರ ಗಮನ ಸೆಳೆದರು. `ಕಟ್ಟಡದ ಬಗ್ಗೆ ಅಧಿಕೃತ ಮಾಹಿತಿಯ ದೊರೆತರೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ~ ಎಂದು ಶಾಸಕ ಜಾರಿಕೊಂಡರು.