ನಾಗಮಂಗಲ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ನವೋದಯ ಪರೀಕ್ಷೆಯಲ್ಲಿ ಅಕ್ರಮ ನಡದಿದೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.
ಕೊಠಡಿ ಮೇಲ್ವಿಚಾರಕರು ಕೆಲ ವಿದ್ಯಾರ್ಥಿಗಳಿಗೆ ತಾವೇ ಉತ್ತರ ಹೇಳಿಕೊಟ್ಟಿದ್ದಾರೆ. ಮೊಬೈಲ್ನಿಂದ ಮಾಹಿತಿ ಪಡೆದು ಉತ್ತರ ನಮೂದಿಸಿದ್ದಾರೆ. ಕೊಠಡಿ ಸಂಖ್ಯೆ 7 ರಲ್ಲಿ ಪುರುಷೋತ್ತಮ್ ಎಂಬ ಮೇಲ್ವಿಚಾರಕರು ಕೆಲ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪರೀಕ್ಷೆಯ ಅವಧಿ ಮುಗಿಯುವ ಮುನ್ನವೇ ಪ್ರಶ್ನೆಪತ್ರಿಕೆಯನ್ನು ಕೊಠಡಿಯಿಂದ ಆಚೆ ಕಳಿಸಲಾಗಿದೆ. ನಂತರ ಮೊಬೈಲ್ ಮೂಲಕ ಪಡೆಯಲಾಗಿದೆ. ಕಾಲೇಜಿನ ಮೊದಲ ಅಂತಸ್ತಿನ ಕೊಠಡಿ ಸಂಖ್ಯೆ 1,2,7,8,9 ಮತ್ತು ನೆಲ ಮಾಳಿಗೆಯ ಕೊಠಡಿ ಸಂಖ್ಯೆ 6 ರಲ್ಲಿ ಹೆಚ್ಚು ಕಾಫಿ ನಡೆದಿದ್ದು ಶಿಕ್ಷಕರು ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು.
ಸ್ಥಳಕ್ಕೆ ಆಗಮಿಸಿದ ಬಿಇಒ ವೇದಮೂರ್ತಿ ಮತ್ತು ಸಿಪಿಐ ಟಿ.ಡಿ.ರಾಜು ಅವರುಗಳು, ಸೂಕ್ತ ತನಿಖೆ ನಡೆಸಿ, ಸಂಬಂಧಿಸಿದವರಿಗೆ ನೋಟಿಸ್ ಜಾರಿಗೊಳಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು.