ಬಾಳೆಹೊನ್ನೂರು: ಇಲ್ಲಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಮಂಗಳೂರು ಎನ್ಸಿಸಿ ಗ್ರೂಫ್ ವತಿಯಿಂದ ಎನ್ಸಿಸಿ ಶಿಬಿರ ಇತ್ತೀಚೆಗೆ ನಡೆಯಿತು.ಜನವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ 21 ಕರ್ನಾಟಕ ಬೆಟಾಲಿಯನ್ ಎನ್ಸಿಸಿ ಉಡುಪಿ ನೇತೃತ್ವದಲ್ಲಿ ಹತ್ತು ದಿನ ಶಿಬಿರ ಹಮ್ಮಿಕೊಳ್ಳಲಾಗಿದೆ.
ತರಬೇತಿ ಶಿಬಿರದಲ್ಲಿ ಎನ್ಸಿಸಿ ಭೂದಳ, ನೌಕಾದಳ ಮತ್ತು ವಾಯುದಳಗಳಿಂದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿರುವ ಎನ್ಸಿಸಿ ಕೆಡೆಟ್ಗಳನ್ನು ಆಯ್ಕೆ ಮಾಡಲಾಗುವುದು ಎಂದು ಕ್ಯಾಂಪ್ ಕಮಾಂಡೆಂಟ್ ಕೆ.ಸುಶೀಲ್ ಗುರುಂಗ್ ತಿಳಿಸಿದರು.
ಶಿಬಿರದಲ್ಲಿ ಮಂಗಳೂರು ಎನ್ಸಿಸಿ ಪಡೆಯ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಶಾಲಾ ಕಾಲೇಜುಗಳ 494 ಕೆಡೆಟ್ಗಳು ಹಾಗೂ 20 ಮಂದಿ ತರಬೇತಿದಾರರು ಪಾಲ್ಗೊಂಡಿದ್ದಾರೆ.
ತರಬೇತಿ ಸಹಾಯಕ ಅಧಿಕಾರಿಗಳಾಗಿ ಮಣಿಪಾಲ್ ಎಂಜಿನಿಯರಿಂಗ್ನ ಪಿ.ಎಂ.ದಳವಾಯಿ, ಸುರತ್ಕಲ್ನ ಎಂ.ಕೆ.ಕುಟ್ಟಿ, ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಬಾಲಕೃಷ್ಣಶೆಟ್ಟಿ, ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಕಾಶ್ರಾವ್, ಕುಂದಾಪುರದ ಡಾ. ನಾರಾಯಣಶೆಟ್ಟಿ, ಬೆಳ್ಮಣ್ಣುವಿನ ಹರಿದಾಸಪ್ರಭು, ಉಜಿರೆಯ ರಮೇಶ್ಮಯ್ಯ ಹಾಗೂ ಸ್ಥಳೀಯ ವಿದ್ಯಾಲಯದ ಕೆ.ಎಂ.ಶಾಜಿ ಮ್ಯಾಥ್ಯೂ, ನವೋದಯ ಪ್ರಾಚಾರ್ಯ ಕೆ.ಎಂ.ರಾಮಿರೆಡ್ಡಿ, ಕಮಾಂಡರ್ ಕೆ.ದಿನೇಶ್ ಭಾಗವಹಿಸಿದ್ದರು.
ಶಿಬಿರದಲ್ಲಿ ಕವಾಯತು, ಬಂದೂಕು ತರಬೇತಿ, ಅಣಕು ಯುದ್ಧ, ಅಗ್ನಿಶಮನ ಪ್ರಾತ್ಯಕ್ಷಿಕೆ ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ.