ನವದೆಹಲಿ (ಪಿಟಿಐ): ಕಳೆದ ಐದು ವರ್ಷಗಳಲ್ಲಿ 3,200 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಷ್ಟಕ್ಕೆ ಕಾರಣವಾಗಿರುವ ರೈಲು ಮಾರ್ಗಗಳನ್ನು ಮುಚ್ಚುವಂತೆ ರಾಜ್ಯಗಳಿಗೆ ಸೂಚನೆ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.
`ಸಂಬಂಧಪಟ್ಟ ರಾಜ್ಯ ಸರ್ಕಾರಗಳನ್ನು ಈ ದಿಸೆಯಲ್ಲಿ ಮನವೊಲಿಸುವ ಕಾರ್ಯ ನಡೆಯುತ್ತಿದೆ~ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಶುಕ್ರವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.
ಕೊಳೆಗೇರಿ ನಿಯಂತ್ರಣಕ್ಕೆ ಕ್ರಮ:
ಇಲಾಖೆಯ ವ್ಯಾಪ್ತಿಯಲ್ಲಿರುವ ಕೊಳೆಗೇರಿ ನಿವಾಸಿಗಳಿಗೆ ಪರಿಹಾರ ಹಾಗೂ ಪುನರ್ವಸತಿ ಕಾರ್ಯಕ್ಕೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಭರತ್ ಸಿನ್ಹ ಸೋಳಂಕಿ ತಿಳಿಸಿದರು.
ಈಗಾಗಲೇ ಈ ವಿಷಯವನ್ನು ಗೃಹನಿರ್ಮಾಣ ಹಾಗೂ ನಗರ ಬಡತನ ನಿರ್ಮೂಲನ ಸಚಿವಾಲಯದೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಐಟಿಡಿಸಿ ವಿರುದ್ಧ ಶಿಸ್ತು ಕ್ರಮ:
2008ರ ಜುಲೈನಿಂದ ಈ ವರ್ಷದವರೆಗೆ ಅಕ್ರಮ, ಭ್ರಷ್ಟಾಚಾರ, ನಕಲಿ ದಾಖಲೆ ಮತ್ತಿತರ ವಿಷಯಗಳನ್ನು ಒಳಗೊಂಡಂತೆ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ( ಐಟಿಡಿಸಿ) ವಿರುದ್ಧ 45 ಶಿಸ್ತು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.
ಈ ಪೈಕಿ 2008-09 ರಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಜುಲೈವರೆಗೆ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪ್ರವಾಸೋದ್ಯಮ ಸಚಿವ ಸುಬೋಧ್ ಕಾಂತ್ ಸಹಾಯ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.