ಧಾರವಾಡ: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ತೆರಳಿದ ಆನೆಗಳ ಮೇಲೆಯೇ ಎಲ್ಲರ ಚಿತ್ತ ಇದೆ. ಆದರೆ ಈ ಆನೆಗಳನ್ನು ತಮ್ಮ ಮರಿಗಳಿಂದ ಅಗಲಿಸಿದ್ದು, ಅವುಗಳ ಕಾಲಿಗೆ ಸರಪಳಿ ಬಿಗಿದು ನರಕಯಾತನೆ ಅನುಭವಿಸುವಂತೆ ಮಾಡಲಾಗುತ್ತಿದೆ ಎಂದು ನಗರದ ಹವ್ಯಾಸಿ ಛಾಯಾಚಿತ್ರಗ್ರಾಹಕ ಹಾಗೂ ವನ್ಯಜೀವಿತಜ್ಞ ಅಶೋಕ ಮನಸೂರ ದೂರಿದ್ದಾರೆ.
ಇತ್ತೀಚೆಗೆ ಛಾಯಾಗ್ರಾಹಣಕ್ಕೆಂದು ನಾಗರಹೊಳೆಗೆ ಹೋದ ಸಂದರ್ಭದಲ್ಲಿ ಆನೆಮರಿಗಳು ಅವರ ಕಣ್ಣಿಗೆ ಬಿದ್ದಿವೆ. ಈ ಬಗ್ಗೆ ವಿಚಾರಿಸಿದಾಗ ಮೈಸೂರು ದಸರಾಗೆ ಕೊಂಡೊಯ್ದ ಆನೆಗಳಿಗೆ ಈ ಮರಿಗಳು ಸೇರಿವೆ ಎಂದು ಅವುಗಳನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ತಿಳಿಸಿದ್ದಾರೆ.
ಈ ಬಗ್ಗೆ `ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ಅಶೋಕ ಮನಸೂರ, `ಮರಿಗಳು ಸರಪಳಿಯ ಬಿಗಿಯನ್ನು ತಡೆಯಲಾಗದೇ ಯಮಯಾತನೆ ಅನುಭವಿಸುತ್ತಿವೆ. ಯಾವುದೇ ತಾಯಿಯನ್ನು ಮಗುವಿನಿಂದ ಅಗಲಿಸಿದರೆ ಹೇಗೆ ಸಂಕಟವಾಗುತ್ತದೋ ಹಾಗೆಯೇ ಆನೆಮರಿಗಳಿಗೂ ಆಗುತ್ತಿದೆ. ನಮ್ಮ ಸಂತೋಷಕ್ಕೆಂದು ತಾಯಿ-ಮಕ್ಕಳನ್ನು ತಿಂಗಳುಗಟ್ಟಲೇ ಅಗಲಿಸುವುದು ಸರಿಯೇ' ಎಂದು ಪ್ರಶ್ನಿಸಿದ್ದಾರೆ.