ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಾಗಲಿಂಗಸ್ವಾಮಿಗಳು ಅವಧೂತ ಶ್ರೇಷ್ಠರು'

Last Updated 14 ಜುಲೈ 2013, 6:37 IST
ಅಕ್ಷರ ಗಾತ್ರ

ನವಲಗುಂದ: ಸನ್ಯಾಸಿಗಳಿಗೆ ಸನ್ಯಾಸ ಜೀವನ, ಗೃಹಸ್ಥರಿಗೆ ಗೃಹಸ್ಥ ಜೀವನ ಶ್ರೇಷ್ಠ ಎಂದು ಹೇಳಿದ  ನಾಗಲಿಂಗಸ್ವಾಮಿಗಳು ಅವದೂತ ಶ್ರೇಷ್ಠರಲ್ಲಿ ಒಬ್ಬರಾಗಿದ್ದಾರೆ ಎಂದು ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಅನಂತರಾಮ ಅಭಿಪ್ರಾಯಪಟ್ಟರು.

ನಾಗಲಿಂಗಸ್ವಾಮಿಗಳ 132ನೇ ಆರಾಧನಾ ಮಹೊತ್ಸವದ ಅಂಗವಾಗಿ ಇಲ್ಲಿ ಶನಿವಾರ ಏರ್ಪಡಿಸಿದ್ದ  ನಾಗಲಿಂಗಾನಾಭವಗೋಷ್ಠಿಯಲ್ಲಿ  ಅಜಾತ ನಾಗಲಿಂಗಸ್ವಾಮಿ ಚರಿತ್ರೆ  ಎಂಬ ಕಿರು ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಪ್ರತಿವರ್ಷ ನಾಗಲಿಂಗಸ್ವಾಮಿಗಳ ಕುರಿತು ಒಂದು ಗ್ರಂಥ ಹೊರಬರಬೇಕೆಂಬ ಈಗಿನ ವೀರಯ್ಯಸ್ವಾಮಿಗಳ ಸಂಕಲ್ಪದಂತೆ  ಜನಸಾಮಾನ್ಯರಿಗೆ ಅರ್ಥವಾಗುವಂತೆ 120 ಪುಟಗಳ ಸಣ್ಣ ಗ್ರಂಥವನ್ನು ರಚಿಸಲಾಗಿದೆ. ನಾಗಲಿಂಗ ಸ್ವಾಮಿಗಳ ಜೀವನ ಮೌಲ್ಯಗಳನ್ನೇ ನಿದರ್ಶನವನ್ನಾಗಿಟ್ಟುಕೊಂಡು ಹಗಲಿರುಳು ಶ್ರಮಪಟ್ಟು ರಚಿಸಿರುವ ಈ ಗ್ರಂಥವನ್ನು ಎಲ್ಲರೂ ಓದಿ ಅವರ ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು' ಎಂದು  ಅವರು ಹೇಳಿದರು.

ನರಗುಂದ ಪತ್ರಿವನ ಮಠದ  ಬಸಯ್ಯಸ್ವಾಮೀಜಿ ಸಾನಿಧ್ಯ ವಹಿಸಿ ಅವಧೂತರೆಂದರೆ ನಿರಾಭಾರತ್ವ ಹೊಂದಿದವರು, ದೇಹದ ಮೇಲೆ ವ್ಯಾಮೋಹ ಹೊಂದದೇ ಸಂಪೂರ್ಣ ಮೈಮರೆತು ನಾಡಿನ ಒಳಿತಿಗಾಗಿ, ಧರ್ಮ, ಜಾತಿ, ಮತ, ಪಂಥ ಎನ್ನದೇ ಶ್ರಮಿಸುವವರು ಎಂದು ಹೇಳಿದರು.

ಶ್ರೀ ಮಠದ ಪೀಠಾಧೀಶರಾದ ವೀರೇಂದ್ರಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಲ್ಲಿಕಾರ್ಜುನ ಪವಾಡಶೆಟ್ಟರ ಸ್ವಾಗತಿಸಿದರು. ಲಿಂಗರಾಜ ಕಮತ ನಿರೂಪಿಸಿದರು. ಶ್ರೀಕಾಂತ ಪಾಟೀಲ ವಂದಿಸಿದರು.

ಸ್ವಯಂ ಉದ್ಯೋಗ ತರಬೇತಿ
ಕಲಘಟಗಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ  2013-14ನೇ ಸಾಲಿನ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯ ಸ್ವಯಂ ಉದ್ಯೋಗ ಕಾರ್ಯಕ್ರಮ ಹಾಗೂ ಕೌಶಲ್ಯ ತರಬೇತಿ ಘಟಕದಡಿ 18 ರಿಂದ 35 ವಯೋಮಾನದವರಿಂದ ಸ್ವಯಂ ಉದ್ಯೋಗ ಹಾಗೂ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪಟ್ಟಣ ಪಂಚಾಯ್ತಿಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಸಂಬಂಧಪಟ್ಟ ದಾಖಲೆಗಳ ಜೊತೆ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯ್ತಿ ಕಲಘಟಗಿ ಇಲ್ಲಿಗೆ ಇದೇ 31ರ ಒಳಗಾಗಿ ಸಲ್ಲಿಸಬೇಕು.

ಮಾಹಿತಿಗೆ ಪಟ್ಟಣ ಪಂಚಾಯ್ತಿ ಸೂಚನಾ ಫಲಕ ನೋಡಬಹುದಾಗಿದೆ ಅಥವಾ ವೆಬ್‌ಸೈಟ್ ಸಂದರ್ಶಿಸಬಹುದಾಗಿದೆ ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಡಿ.ಎಂ. ಡಾಕ್ಟರ್ 16ಕ್ಕೆ
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನ ಔಷಧ ಗುಣಶಾಸ್ತ್ರ ವಿಭಾಗದ ಪಶುವೈದ್ಯಾಧಿಕಾರಿ ಡಾ.ಶರಣಬಸಪ್ಪ ರೋಣ ಅವರು ಇದೇ 16ರಂದು ಸಂಜೆ 6.50ರಿಂದ 7.20ರವರೆಗೆ  `ಪ್ರಾಣಿ ಜನ್ಯಕಾಯಿಲೆಗಳು' ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ಪ್ರಶ್ನೆಗಳನ್ನು  08362443 414, 2443 415, 2443 416 ಸಂಖ್ಯೆಗಳಿಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಬಹುದು.

ಉಪನ್ಯಾಸ ಇಂದು
ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಇದೇ 14ರಂದು ಸಂಜೆ 4ಕ್ಕೆ `ಭಾರತದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಮಾನಹಾನಿ ಮೊಕದ್ದಮೆ' ಕುರಿತು ಸರ್ಕಾರಿ ಸಹಾಯಕ ವಕೀಲ ಮಹೇಶ ವೈದ್ಯ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT