ಹುಬ್ಬಳ್ಳಿ: `ವೃತ್ತಿ ನಾಟಕ ಕಂಪೆನಿಗಳಿಗೆ ಪ್ರತಿ ವರ್ಷ ಐದು ಲಕ್ಷ ರೂಪಾಯಿ ನೆರವು ನೀಡಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶನಿವಾರ ಇಲ್ಲಿ ಘೋಷಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು 35 ರಂಗಕರ್ಮಿಗಳಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
`ಹಿರಿಯ ರಂಗ ಕಲಾವಿದರಿಗೆ ನೀಡುತ್ತಿರುವ ಒಂದು ಸಾವಿರ ರೂಪಾಯಿ ಮಾಸಾಶನವನ್ನು ಮುಂದಿನ ಬಜೆಟ್ನಲ್ಲಿ ಹೆಚ್ಚಿಸಲಾಗುತ್ತದೆ~ ಎಂದು ಅವರು ಪ್ರಕಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, `ರಂಗಭೂಮಿಯನ್ನೇ ಕಸುಬಾಗಿ ಮಾಡಿಕೊಂಡು, ಅದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಂಗ ಕಲಾವಿದರು ನಮ್ಮ ನಾಡಿನ ಸಾಂಸ್ಕೃತಿಕ ವಾರಸುದಾರರು. ಅಂಥ ವಾರಸುದಾರರಾದ 17,000 ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ನೀಡಲಾಗುತ್ತಿದೆ~ ಎಂದು ಹೇಳಿದರು.
ಪ್ರಶಸ್ತಿ ಪಡೆದ ರಂಗಕರ್ಮಿಗಳ ಪರಿಚಯ ಕೈಪಿಡಿ `ರಂಗಾವತರಣ~ವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಬಿಡುಗಡೆ ಮಾಡಿದರು. ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ ಸ್ವಾಗತಿಸಿದರು.
ಮೆರವಣಿಗೆ: ಸಮಾರಂಭಕ್ಕೂ ಮುನ್ನ ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದವರೆಗೆ ಜಾನಪದ ತಂಡಗಳೊಂದಿಗೆ ಪ್ರಶಸ್ತಿ ಪುರಸ್ಕೃತರನ್ನು ತೆರೆದ ವಾಹನಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಮಾಲತಿ ಸುಧೀರ, ಅಕಾಡೆಮಿ ರಿಜಿಸ್ಟ್ರಾರ್ ನರಸಿಂಹಮೂರ್ತಿ, ಸದಸ್ಯರು ಹಾಗೂ ಕಲಾವಿದರು ನರ್ತಿಸುವ ಮೂಲಕ ಮೆರವಣಿಗೆಗೆ ಕಳೆ ತಂದರು.