ಯೋಗಗುರು ಕೋಟ್ಯಧಿಪತಿ ರಾಮದೇವ್ ಅವರು, ರಾಮಲೀಲಾ ಮೈದಾನದಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಚಳವಳಿ ತೀರಾ ಹಾಸ್ಯಾಸ್ಪದವಾದುದು. ರಾಮದೇವ್ ಅವರು ಇದುವರೆಗೂ ಗಳಿಸಿರುವ ಮೂವತ್ತೇಳು ಕೋಟಿ ರೂ.ಗಳ ಆಸ್ತಿಯ ಬಗೆಗೆ, ಆದಾಯ ತೆರಿಗೆ ಇಲಾಖೆಯು ಜಾರಿ ಮಾಡಿರುವ ನೋಟಿಸ್ಗಳಿಗೆ ಉತ್ತರ ಹೇಳುವ ನೈತಿಕ ಶಕ್ತಿಯೇ ಅವರಿಗಿಲ್ಲ.
ಆ ಬಗೆಗೆ ಕೆಲವು ರಾಷ್ಟ್ರೀಯ ಮಾಧ್ಯಮದವರು ನಡೆಸಿರುವ ಸಂದರ್ಶನದಲ್ಲಿ ಅವರು ಎತ್ತಿದ ಪ್ರಶ್ನೆಗಳಿಗೆ ರಾಮದೇವ್ ನೀಡಿರುವುದು ತೀರಾ ನಗೆಪಾಟಲಿನ ಉತ್ತರಗಳು. ಈ ಹಿಂದಿನ ಚಳವಳಿಯನ್ನು ಭ್ರಷ್ಟ ವಿರೋಧಿ ಎಂದು ಕರೆದುಕೊಂಡ ರಾಮದೇವ್, ಆ ನಂತರದ ಚಳವಳಿಯನ್ನು ವಿದೇಶಗಳಲ್ಲಿರುವ ಕಪ್ಪು ಹಣದ ವಿರೋಧಿ ಚಳವಳಿ ಎಂದರು.
ಈಗಿನ ತಮ್ಮ ಚಳವಳಿ ಲೋಕಪಾಲ ಮಸೂದೆಯ ಸಲುವಾಗಿ ಎನ್ನುತ್ತಿದ್ದಾರೆ. ಅಂದರೆ, ಇವೆಲ್ಲಾ ರಾಮದೇವ್ ಅವರ ನಾಟಕೀಯ ಚಳವಳಿಗಳಲ್ಲದೆ ಬೇರೇನೂ ಅಲ್ಲವೆಂಬುದು ತುಂಬಾ ಸುಲಭವಾಗಿಯೇ ಅರ್ಥವಾಗುತ್ತದೆ.