ಸಿಂಧನೂರು: ಕರ್ನಾಟಕ ರೈತ ಸಂಘವು ಸರ್ಕಾರಿ ಹಾಗೂ ಹೆಚ್ಚುವರಿ ಭೂಮಿ ವಿತರಣೆ, ಹಾಗೂ ಗುಡಿಸಲು ನಿವಾಸಿಗಳಿಗೆ ಹಕ್ಕು ಪತ್ರಗಳ ಹಂಚಿಕೆಗೆ ಕಳೆದ 32ದಿನಗಳಿಂದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಲಿಂಗಸುಗೂರು ಸಹಾಯಕ ಆಯುಕ್ತ ಪಿ.ಯೋಗೇಶ ಶನಿವಾರ ಆಗಮಿಸಿ ಮುಖಂಡರೊಂದಿಗೆ ಚರ್ಚಿಸಿದರು. ಶಾಸಕ ವೆಂಕಟರಾವ್ ನಾಡಗೌಡರ ಭೂ ಪ್ರಕರಣವನ್ನು ತನಿಖೆ ಮಾಡುವುದಾಗಿ ಭರವಸೆ ನೀಡಿದರು.
ಪಗಡದಿನ್ನಿ ಗ್ರಾಮದಲ್ಲಿ ಅನಧಿಕೃತವಾಗಿ 20.24 ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿರುವ ನಾಡಗೌಡರಿಂದ ತೆರವುಗೊಳಿಸಬೇಕು, ನಗರದ 768/1,2,3 ಸರ್ವೆ ನಂಬರ್ಗಳ ಸರ್ಕಾರಿ ಭೂಮಿ ಹಾಗೂ ಸಾರ್ವಜನಿಕ ಉದ್ಯಾನವನ, ಸರ್ಕಾರಿ ಹಣ್ಣಿನ ತೋಟದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ಟಿಯುಸಿಐ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ, ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಬಡಿಗೇರ ಅವರು ಸಹಾಯಕ ಆಯುಕ್ತರನ್ನು ಒತ್ತಾಯಿಸಿದರು.