ಮೂಡಿಗೆರೆ: ಸೋಮವಾರ ಬೆಳಿಗ್ಗೆ ಪಟ್ಟಣಕ್ಕೆ ನುಗ್ಗಿದ ಕಾಡುಹಂದಿ, ಎದುರಿಗೆ ಸಿಕ್ಕ ಹಲವರನ್ನು ತಿವಿದು ಗಾಯಗೊಳಿಸಿದೆ. ಮಹಿಳೆ ಸೇರಿದಂತೆ ಇಬ್ಬರು ಪಟ್ಟಣದ ಆಸ್ಪತ್ರೆ ಸೇರಿದ್ದಾರೆ.
ಹಳಸೆ ಗ್ರಾಮದಿಂದ ಹಾಲು ಮಾರಲು ಬರುವ ಸರೋಜಮ್ಮ(40) ಜೆ.ಎಂ.ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾಡುಹಂದಿ ದಾಳಿ ಮಾಡಿದೆ. ಕರುಣ(30) ಎಂಬಾತನನ್ನೂ ಅಟ್ಟಾಡಿಸಿ ಕೋರೆಯಿಂದ ತಿವಿದಿದೆ. ನಂತರ ಖಾದರಿ ಕ್ಯಾಂಟಿನ್ ಬಳಿಯ ಜನರು ಮತ್ತು ಸುಂಡೇಕೆರೆ ಹಳ್ಳದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರ ಮೇಲೂ ದಾಳಿ ಮಾಡಿದೆ. ಕಾಡುಹಂದಿ ಆಟಾಟೋಪ ಕಂಡು ಪಟ್ಟಣದ ಜನ ಆತಂಕಿತರಾಗಿದ್ದರು.
ಸುದ್ದಿ ತಿಳಿದು ಆಗಮಿಸಿದ ವಲಯ ಅರಣ್ಯಾಧಿಕಾರಿ ಹರ್ಷವರ್ಧನ್ ನೇತೃತ್ವದ ತಂಡ, ಕಾಡುಹಂದಿಯನ್ನು ಕುನ್ನಹಳ್ಳಿ ಮಾರ್ಗವಾಗಿ ಕಾಡಿಗೆ ಓಡಿಸಿತು.