ಬೆಂಗಳೂರು: ಕಾವೇರಿ ಮೊದಲನೇ ಹಂತದ ಕೊಳವೆ ಮಾರ್ಗದಲ್ಲಿ ತುರ್ತು ದುರಸ್ತಿ ಕಾರ್ಯ ನಡೆಯಲಿರುವ ಕಾರಣ ನಗರದ ಕೆಲವು ಪ್ರದೇಶಗಳಲ್ಲಿ ಇದೇ 22 ಹಾಗೂ 23ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮೊದಲನೇ ಹಂತದ ಯೋಜನೆಯ 1200 ಎಂ ಎಂ ಗಾತ್ರದ ಕೊಳವೆ ಮಾರ್ಗದಲ್ಲಿ ಜಯನಗರ ಒಂದನೇ ಬ್ಲಾಕ್ 46ನೇ ಅಡ್ಡ ರಸ್ತೆ ಬಳಿ ದೊಡ್ಡ ಪ್ರಮಾಣದ ಸೋರಿಕೆ ಕಂಡುಬಂದಿದೆ. ತುರ್ತು ದುರಸ್ತಿ ಕಾರಣಕ್ಕಾಗಿ 22ರಂದು ಸುಮಾರು 6 ರಿಂದ 10 ಗಂಟೆಗಳ ಕಾಲ ನೀರು ಸ್ಥಗಿತಗೊಳಿಸಲಾಗುತ್ತದೆ.
ಇದರಿಂದಾಗಿ 22 ಮತ್ತು 23ರಂದು ಕುಮಾರಸ್ವಾಮಿ ಬಡಾವಣೆ, ಬನಶಂಕರಿ, ಎಂ.ಎನ್.ಕೆ ಉದ್ಯಾನ, ಬೈರಸಂದ್ರ, ಸಿಎಲ್ಆರ್, ಆಡುಗೋಡಿ, ಲಕ್ಕಸಂದ್ರ, ಸೇಂಟ್ ಜಾನ್ಸ್ ಕಾಲೇಜು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.