ಬೆಂಗಳೂರು: `ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೊ ಅಷ್ಟೂ ದಿನ ನಾಡು ಕಟ್ಟುವ ಕೆಲಸದಲ್ಲಿ ಪ್ರಾಮಾಣಿಕತೆಯಿಂದ ತೊಡಗಿಸಿಕೊಳ್ಳುತ್ತೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇಲ್ಲಿ ಹೇಳಿದರು.
ಉತ್ತರಹಳ್ಳಿ ಸಮೀಪದ ಎಸ್.ಜೆ.ಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
`ಆದಿಚುಂಚನಗಿರಿ ಶ್ರೀಗಳು ಮಠದ ಪತ್ರಿಕೆಯಲ್ಲಿ ಸ್ವಾರ್ಥ ಬಿಟ್ಟು, ದುರಾಸೆಯನ್ನು ದೂರವಿಟ್ಟು ಕೆಲಸ ಮಾಡುವ ಅಗತ್ಯ ಇದೆ~ ಎಂದು ಹೇಳಿದ್ದಾರೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ಸ್ವಾರ್ಥ ಸಾಧನೆಗೆ ಮುಂದಾಗದೆ, ಜನಪರ ಕೆಲಸಗಳನ್ನು ಮಾಡುತ್ತೇನೆ~ ಎಂದು ಹೇಳಿದರು.
ಮುಖ್ಯಮಂತ್ರಿಯವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರ್.ಅಶೋಕ ಅವರು `ಸದಾನಂದ ಗೌಡರು ಬಾಕಿ ಉಳಿದಿರುವ 20 ತಿಂಗಳೂ ಮುಖ್ಯಮಂತ್ರಿಯಾಗಿರುತ್ತಾರೆ. ಇದರಲ್ಲಿ ಒಂದು ದಿನವೂ ಕಡಿಮೆ ಆಗುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.
`ಗೌಡರು ಮಂಗಳೂರು ಮೀನು ಇದ್ದಂತೆ. ಮೀನು ಯಾರ ಕೈಗೂ ಸಿಗುವುದಿಲ್ಲ. ಹಾಗಾಗಿ ಅವರು ಅವಧಿಯನ್ನು ಪೂರೈಸುತ್ತಾರೆ. ಈ ವಿಷಯದಲ್ಲಿ ಆತಂಕ ಬೇಡ~ ಎಂದು ಹೇಳಿದರು. ಗೌಡರು ಉತ್ತಮ ಆಡಳಿತ ನೀಡಿ ಕರ್ನಾಟಕವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲಿದ್ದಾರೆ. ಸ್ವಜನ ಪಕ್ಷಪಾತದಿಂದ ದೂರ ಉಳಿಯಲಿದ್ದಾರೆ ಎಂದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅಶೋಕ, ಕೊಪ್ಪಳ ಉಪ ಚುನಾವಣೆಯನ್ನು ಸಾಮೂಹಿಕ ನಾಯಕತ್ವದ ಮೇಲೆ ಎದುರಿಸುತ್ತೇವೆ ಎಂದರು. `ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯ ಪಕ್ಷವಲ್ಲ; ಕಾರ್ಯಕರ್ತರ ಪಕ್ಷ~ ಎಂದೂ ಹೇಳಿದರು.