ವಿಜಾಪುರ: `ನಾನು ಪೆದ್ದ, ಬೆನ್ನಿಗೆ ಚೂರಿ ಹಾಕುವವರು ನನ್ನ ಜೊತೆಗೆ ಇದ್ದರೂ ಅವರನ್ನು ಅರ್ಥಮಾಡಿಕೊಳ್ಳಲಿಲ್ಲ...' ಎಂದು ಕೆಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸಿಂದಗಿ ತಾಲ್ಲೂಕು ದೇವರ ಹಿಪ್ಪರಗಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, `ಮೊದಲು ಪಕ್ಷದವರು ನನ್ನ ಬೆನ್ನಿಗೆ ಚೂರಿ ಹಾಕಿದರು. ಆ ನಂತರ ನನ್ನ ಜೊತೆಗಿದ್ದ ಕೆಲ ಸಚಿವರು ಆ ಕೆಲಸ ಮಾಡಿದರು' ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಹೇಳಿದರು.
`ಸಚಿವರಾದ ಮುರುಗೇಶ ನಿರಾಣಿ, ಉಮೇಶ ಕತ್ತಿ, ಬಸವರಾಜ ಬೊಮ್ಮಾಯಿ ಅವರ ವಿರುದ್ಧವೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.
ರಾಮಕೃಷ್ಣ ಹೆಗಡೆ ಅವರ ಜೊತೆಗಿದ್ದವರೆಲ್ಲ ನಮ್ಮಂದಿಗೆ ಬರುತ್ತಿದ್ದು, ಜನತಾ ಪರಿವಾರ ಒಂದುಗೂಡಿಸುವ ಕೆಲಸವನ್ನು ಕೆಜೆಪಿ ಮಾಡುತ್ತಿದೆ. ಬಹುತೇಕ ಕಡೆಗಳಲ್ಲಿ ನಮಗೆ ಕಾಂಗ್ರೆಸ್ ಮಾತ್ರ ಎದುರಾಳಿ' ಎಂದು ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.