ಸುಮಾರು 10 ವರ್ಷಗಳಿಂದ ನಾವು ಎಂಬಿಎಸ್ 5 ವಾಹನ ಅವಲಂಬಿಸಿದ್ದು, ಹಿಂದೆ ಈ ಮಾರ್ಗದಲ್ಲಿ 8–9 ವಾಹನಗಳಿದ್ದು ಅದು ಕ್ರಮೇಣ ಕಡಿಮೆಯಾಗಿ ಎರಡು ವಾಹನಗಳು ಮಾತ್ರ ಆ ಮಾರ್ಗದಲ್ಲಿ ಉಳಿದುಕೊಂಡಿತು. ಈಗ ಒಂದೇ ಒಂದು ವಾಹನವೂ ಸರಿಯಾಗಿ ಸಂಚರಿಸುತ್ತಿಲ್ಲ. ಪೀಣ್ಯ ಸುತ್ತಮುತ್ತಲ ಪ್ರದೇಶ ಮತ್ತು ಗಿರಿನಗರ, ಶ್ರೀನಗರ ಸುತ್ತಮುತ್ತಲ ಸ್ಥಳಗಳ ನಡುವೆ ಪ್ರಯಾಣಿಸುವವರು ಈ ವಾಹನವನ್ನೇ ಅವಲಂಬಿಸಿದ್ದೇವೆ. ಹಿಂದಿನಂತೆಯೇ 8 ವಾಹನ ಸಂಚರಿಸಲಿ ಎಂದು ಕೇಳದೇ ಇರುವ ಎರಡೇ ಬಸ್ಸುಗಳ ಸಮಯಕ್ಕೆ ಹೊಂದಿಸಿಕೊಂಡು ಹೇಗೋ ನಮ್ಮ ಕೆಲಸಕ್ಕೆ ಹೋಗುತ್ತಿದ್ದೆವು.
ಆದರೆ ಕಳೆದ ಒಂದು ತಿಂಗಳಿಂದ ಎಂಬಿಎಸ್ 5 ವಾಹನ ಸರಿಯಾಗಿ ಬರುತ್ತಿಲ್ಲ. ಕೆಎ 01 ಎಫ್ 8791 ವಾಹನ ನಾಪತ್ತೆಯಾಗಿದೆ. ಕೆಎ 50 ಎಫ್ 215 ಗಾಡಿ ಕೆಲವೊಮ್ಮೆ ಮಾತ್ರ ಸಿಗುತ್ತದೆ. ಈ ಬಗ್ಗೆ ಹಿಂದಿನಿಂದಲೂ ಅನೇಕ ಬಾರಿ ಬಿಎಂಟಿಸಿ ಕಾಲ್ ಸೆಂಟರ್, ಘಟಕ ವ್ಯವಸ್ಥಾಪಕರಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ. ‘ನಾಳೆಯಿಂದ ಬರುತ್ತದೆ ಏನೂ ಯೋಚನೆ ಮಾಡಬೇಡಿ’ ಎಂದು ದೂರವಾಣಿ ಕರೆಗೆ ಉತ್ತರಿಸುತ್ತಾರೆಯೇ ಹೊರತು ಬಸ್ ಸಂಚಾರ ಸರಿಪಡಿಸುವ ಹಾಗೂ ಸರಿಯಾದ ವೇಳೆಗೆ ಸಂಚರಿಸುವ ಬಗ್ಗೆ ಯೋಚಿಸುವುದೇ ಇಲ್ಲ. ಕೆಲವು ದಿನ ಆ ಬಸ್ ಬರುತ್ತದೆ, ಮತ್ತೆ ಕ್ರಮೇಣ ಸಂಚಾರ ನಿಲ್ಲುತ್ತದೆ. ಮತ್ತೆ ನಾವು ದೂರು ನೀಡಬೇಕು.
ಆದಾಯ ಇಲ್ಲದಿರುವುದರಿಂದ ಆ ಮಾರ್ಗದಲ್ಲಿ ಬಸ್ ಸೌಕರ್ಯ ಕಲ್ಪಿಸುವುದು ಕಷ್ಟ ಎಂದಾದರೆ, ಪಾಸ್ ಮಾಡಿಸಿಕೊಂಡವರ ಪಾಡೇನು? ಆ ಪಾಸ್ಗೆ ನಾವು ಮೊದಲೇ ಹಣ ಪಾವತಿಸುವುದಿಲ್ಲವೇ? ಅದು ಆದಾಯದ ಮಾನದಂಡವಲ್ಲವೇ? ಜನರ ಅನುಕೂಲವೇ ತಮ್ಮ ಸಂಸ್ಥೆಯ ಧ್ಯೇಯ ಎಂದು ಆಗಿದಾಂಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನಿಡುವ ಸಂಸ್ಥೆ ದಯವಿಟ್ಟು ಇತ್ತ ಗಮನಹರಿಸಿ ಎಂಬಿಎಸ್ 5 ಸರಿಯಾಗಿ ಸಂಚರಿಸುವಂತೆ ಮಾಡಬೇಕೆಂದು ಮನವಿ.