ರಾಯಚೂರು: ರಾಯಚೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಏಪ್ರಿಲ್ 09 ರಂದು ಸಹಾಯಕ ಆಯುಕ್ತರಾದ ಎನ್ ಮಂಜುಶ್ರಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನಾಮ ಪತ್ರಗಳನ್ನು ತುಂಬುವ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಯಿತು.
ವಿವಿಧ ಪಕ್ಷಗಳವರು ಒಂದೇ ವೇಳೆಯಲ್ಲಿ ನಾಮ ಪತ್ರಗಳನ್ನು ಸಲ್ಲಿಸಲು ಬರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಅನಾನೂಕೂಲವಾಗುವುದು. ಆದ್ದರಿಂದ, ಬೇರೆ ಬೇರೆ ಸಮಯದಲ್ಲಿ ನಾಮ ಪತ್ರಗಳನ್ನು ಸಲ್ಲಿಸುವುದು ಒಳ್ಳೆಯದು ಎಂದು ಸಹಾಯಕ ಆಯುಕ್ತರು ಸಲಹೆ ನೀಡಿದರು.
ಒಂದು ವೇಳೆ ಒಂದೇ ಅವಧಿಯಲ್ಲಿ ಬರುವ ಪ್ರಮೇಯವಿದ್ದರೆ ಮೊದಲೆ ಸಂಬಂಧಪಟ್ಟವರಿಗೆ ಸೂಚಿಸಿದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ರಜಾ ದಿನಗಳಾದ ಏಪ್ರಿಲ್ 11 ಮತ್ತು 14 ರಂದು ನಾಮ ಪತ್ರಗಳ ಸಲ್ಲಿಕೆಗೆ ರಜೆ ಇರುತ್ತದೆ. ಆದರೆ, ಎರಡನೆಯ ಶನಿವಾರದಂದು ಯಥಾ ಪ್ರಕಾರ ನಾಮ ಪತ್ರಗಳನ್ನು ಸ್ವೀಕರಿಸಲಾಗುವದು ಎಂದು ಹೇಳಿದರು.