ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾಗಿ ಎಸ್. ಸೋಮನಾಯಕ ಬುಧವಾರ ನಾಮಪತ್ರ ಸಲ್ಲಿಸಿದರು.
ಪಕ್ಷದ ಕಚೇರಿಯಿಂದ ಸಾವಿರಾರು ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಆರಂಭಿಸಿದರು. ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜೋಡಿರಸ್ತೆ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲಸುಬ್ರಮಣ್ಯ, ನೂರೊಂದು ಶೆಟ್ಟಿ, ಆರ್. ಸುಂದರ್, ಸುಂದರ್ರಾಜು, ಸಿ.ಆರ್. ಶಿವಕುಮಾರ್, ರಾಜೇಶ್ ಹಾಜರಿದ್ದರು.
ಬಹುಜನ ಸಮಾಜ ಪಕ್ಷ
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಆರ್.ಪಿ. ನಂಜುಂಡಸ್ವಾಮಿ ನಾಮಪತ್ರ ಸಲ್ಲಿಸಿದರು.
ಮೆರವಣಿಗೆ ಮೂಲಕ ಪಕ್ಷದ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮುಖಂಡರಾದ ಬ್ಯಾಡಮೂಡ್ಲು ಬಸವಣ್ಣ, ಪರ್ವತ್ರಾಜು ಇದ್ದರು.
ಜೆಡಿಎಸ್ ಮೆರವಣಿಗೆ
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಪಿ. ಸಣ್ಣಮಾದಶೆಟ್ಟಿ ನಾಮಪತ್ರ ಸಲ್ಲಿಸಿದರು.
ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮುಖಂಡ ಡಾ.ಎ.ಆರ್. ಬಾಬು, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ವೀರೇಶ್, ಮಲ್ಲೂಪುರ ಶಿವಕುಮಾರ್, ಶಿವಸ್ವಾಮಿ, ಪುಟ್ಟಸ್ವಾಮಿಗೌಡ ಹಾಜರಿದ್ದರು.
ಗೆಲುವು ಖಚಿತ: ಮಹೇಶ್
ಕೊಳ್ಳೇಗಾಲ: ಬಿಎಸ್ಆರ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಸೇರಿದಂತೆ ಇತರೆ ಜನಾಂಗದ ಮುಖಂಡರು ಈ ಬಾರಿ ನನಗೆ ಬೆಂಬಲ ಸೂಚಿಸಲಿದ್ದು ಅತಿಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದಾಗಿ ಬಿಎಸ್ಪಿ ಅಭ್ಯರ್ಥಿ ಎನ್.ಮಹೇಶ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ನಂತರ ಬಿಎಸ್ಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
2 ಬಾರಿ ನಾನು ಸೋಲನ್ನು ಅನುಭವಿಸಿದ್ದೇನೆ. ಕ್ಷೇತ್ರದ ಎ್ಲ್ಲಲ ಕೋಮಿನ ಜನರಿಗೆ ನನ್ನ ಬಗ್ಗೆ ಅನುಕಂಪ ಇದ್ದು, ಈ ಬಾರಿ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಪಕ್ಷದ ಮುಖಂಡರು ಕಾರ್ಯಕರ್ತರು ಮನೆ- ಮನೆಗೆ ತೆರಳಿ ಮತದಾರರೊಡನೆ ಉತ್ತಮ ಬಾಂಧವ್ಯದಿಂದ ಅವರ ಮನವೊಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಮುಖಂಡ ಶಿವಮಲ್ಲು, ಸಿದ್ದೇಶ್ಬಾಬು, ಬಿ.ಎಸ್.ಆರ್. ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ, ನಾಗೇಂದ್ರ, ರಾಮಕೃಷ್ಣ, ಜಗದೀಶ್, ರಂಗಸ್ವಾಮಿ, ರಾಜಶೇಖರಮೂರ್ತಿ, ಇತರರು ಇದ್ದರು.
ದತ್ತೇಶ್ಕುಮಾರ್ ನಾಮಪತ್ರ ಸಲ್ಲಿಕೆ
ಕೊಳ್ಳೇಗಾಲ: ನಾಮಪತ್ರ ಸಲ್ಲಿಕೆಯ ಕೊನೆ ದಿನ ಹನೂರು ಕ್ಷೇತ್ರದಿಂದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಮುಖಂಡ ಡಾ.ದತ್ತೇಶ್ಕುಮಾರ್ ಬುಧವಾರ ನಾಮಪತ್ರ ಸಲ್ಲಿಸಿದರು.
ಹನೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ದತ್ತೇಶ್ ಭಾರಿ ಪ್ರಯತ್ನ ನಡೆಸಿದ್ದರು. ನರೇಂದ್ರ ಅವರು ಹಾಲಿ ಶಾಸಕರಾಗಿರುವ ಹಿನ್ನೆಲೆಯಲ್ಲಿ ಹಾಗೂ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಉತ್ತಮ ಫಲಿತಾಂಶದ ಕಾರಣ ನರೇಂದ್ರ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ.
ಪಕ್ಷದ ಮುಖಂಡರು ಬಂಡಾಯ ವಾಗಿ ಸ್ಪರ್ಧಿಸದಂತೆ ಒತ್ತಡ ಹೇರಿದ ನಡುವೆಯೂ ತಮ್ಮ ನಿಲುವಿನಿಂದ ಹಿಂದೆ ಸರಿಯದೆ ಡಾ. ದತ್ತೇಶ್ಕುಮಾರ್ ತಮ್ಮ ಅಪಾರ ಮುಖಂಡರು ಕಾರ್ಯಕರ್ತರ ಜೊತೆಗೂಡಿ ಬುಧವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಮುಖಂಡ ಮಂಚೇಗೌಡರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಕೆ. ನಟರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಪ್ಪ, ಕರೀಕಲ್ಲು ಗಣಿ ಉದ್ಯಮಿ ನಾಗರಾಜು ಇದ್ದರು.
ಚುನಾವಣಾಧಿಕಾರಿ ರಮೇಶ್ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.