ತುಮಕೂರು: ‘ಬಿಜೆಪಿ ಸರ್ಕಾರದ ನಾಯಕತ್ವ ಬದಲಾಗಲಿದೆ ಎನ್ನುವ ಹಗಲು ಗಸನು ಕಾಣುವುದನ್ನು ಪ್ರತಿಪಕ್ಷಗಳು ಬಿಡಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಐದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಲಿದ್ದಾರೆ. ಇದನ್ನು ಪಕ್ಷದ ಹೈಕಮಾಂಡ್ ಕೂಡ ಸ್ಪಷ್ಟಪಡಿಸಿದೆ’ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ನಂಜನಗೂಡಿನ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಕರೆದೊಯ್ಯಲು ಸೋಮವಾರ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದ ಅವರು, ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಜನತೆ ಯಡಿಯೂರಪ್ಪ ಅವರಿಗೆ ಐದು ವರ್ಷದ ಅವಧಿಗೆ ಅಧಿಕಾರ ನೀಡಿದ್ದಾರೆ. ಪಕ್ಷದೊಳಗೆ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಉದ್ಭವಿಸಿಲ್ಲ. ಕೇಂದ್ರದ ವರಿಷ್ಠರು ಕೂಡ ಮುಖ್ಯಮಂತ್ರಿ ಬೆಂಬಲಕ್ಕಿದ್ದಾರೆ. ಅತ್ಯಂತ ಜನಪರ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಬೇಕು. ಏನೆ ಸಮಸ್ಯೆಗಳಿದ್ದರೂ ವಿಧಾನಸೌಧದಲ್ಲಿ ಚರ್ಚಿಸಲಿ. ಅದು ಬಿಟ್ಟು, ಹಾದಿ-ಬೀದಿ ರಂಪ ಮಾಡುವುದು ಸರಿಯಲ್ಲ ಎಂದರು.