ಕೊಲ್ಹಾರ: ಸಮಾಜದ ನೇತೃತ್ವ ವಹಿಸುವ ವ್ಯಕ್ತಿಗಳಿಗೆ ನೈತಿಕ ಬಲ ಅಗತ್ಯ. ಹಾಗಾದಾಗ ಮಾತ್ರ ಸಮಾಜದ ದೀನ ದಲಿತರ ಸೇವೆ ಮಾಡುವ ಅರ್ಹತೆ ಪಡೆಯುವರು. ಯುವ ನೇತಾರರಲ್ಲಿ ನೈತಿಕ ಬಲ ಕುಸಿಯುತ್ತಿರುವುದು ವಿಷಾದನೀಯ ಎಂದು ಯರನಾಳದ ಸಂಗನಬಸವ ಸ್ವಾಮೀಜಿ ಹೇಳಿದರು.
ಇಲ್ಲಿಗೆ ಸಮೀಪದ ಮಸೂತಿ ಗ್ರಾಮದಲ್ಲಿ ಗ್ರಾಮ ಸ್ವರಾಜ್ ಯೋಜನೆಯಡಿ ನಿರ್ಮಿಸಿದ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ನೀರು ಸಂಗ್ರಹಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನೂತನ ಗ್ರಾ.ಪಂ. ಕಟ್ಟಡವನ್ನು ಶಾಸಕ ಎಸ್.ಕೆ. ಬೆಳ್ಳುಬ್ಬಿ ಉದ್ಘಾಟಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡಿದರೆ ಗ್ರಾಮಗಳು ಯಾವುದೇ ಮೂಲಸೌಲಭ್ಯಗಳಿಂದ ವಂಚಿತವಾಗಲು ಸಾಧ್ಯವಿಲ್ಲ ಎಂದು ನುಡಿದರು.
ನೀರು ಸಂಗ್ರಹಣಾ ಘಟಕವನ್ನು ಮಾಜಿ ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯತಿಗಳಿಗೆ ಸರಕಾರ ನೇರವಾಗಿ ಹಣ ಬಿಡುಗಡೆ ಮಾಡುತ್ತಿದೆ. ಇದರಿಂದ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿವೆ. ಸ್ಥಳೀಯ ಜನಪ್ರತಿನಿಧಿಗಳು ಅನುದಾನದ ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಪಾಟೀಲ, ತಾ.ಪಂ ಅಧ್ಯಕ್ಷೆ ಕಸ್ತೂರಿಬಾಯಿ ಬಿಸ್ಟಗೊಂಡ, ಉಪಾಧ್ಯಕ್ಷೆ ವಿರೂಪಾಕ್ಷಮ್ಮ ಲಿಂಗದಳ್ಳಿ, ಜಿ.ಪಂ. ಸದಸ್ಯರಾದ ವಿಠ್ಠಲರಾವ ಪವಾರ, ಚಂದ್ರಶೇಖರಗೌಡ ಪಾಟೀಲ, ತಾ.ಪಂ ಅಧಿಕಾರಿ ವಿ.ಎಂ. ಕೋನರೆಡ್ಡಿ, ಜಿ.ಪಂ ಎಇಇ ಎಸ್.ಎ.ಪಾಟೀಲ, ತಾ.ಪಂ ಸದಸ್ಯೆ ಮಂಗಲಾ ಬೆಲ್ಲದ, ಗ್ರಾ.ಪಂ ಅಧ್ಯಕ್ಷರಾದ ದ್ಯಾಮಣ್ಣ ಕಾಡಸಿದ್ಧ (ತಳೇವಾಡ), ಬಂದೇನವಾಜ ಬಿಜಾಪುರ (ಗೊಳಸಂಗಿ), ಈಶ್ವರ ಲಮಾಣಿ (ಕೂಡಗಿ) ಮಸೂತಿ ಪಿ.ಕೆ.ಪಿ.ಎಸ್ ಅಧ್ಯಕ್ಷ ಕೆ.ವಿ. ಕುಲಕರ್ಣಿ, ಬಿ.ಎ. ಪಾಟೀಲ, ಡಾ. ರಮೇಶ ಕಾಗಲ, ರಾಜು ಬಿಸ್ಟಗೊಂಡ, ಆನಂದ, ಬಿಸ್ಟಗೊಂಡ, ಗ್ರಾ.ಪಂ ಉಪಾಧ್ಯಕ್ಷ ಬಸಪ್ಪ ಯರಂತೇಲಿ, ಎಂಜಿನಿಯರ್ಗಳಾದ ಎಸ್.ಎಂ. ಸಜ್ಜನ, ಎಂ.ಬಿ. ಕಳಸಗೊಂಡ ಆಗಮಿಸಿದ್ದರು.
ಪಿಡಿಒ ಐ.ಜಿ. ಹೊಸಮಠ ಸ್ವಾಗತಿಸಿದರು. ಶಿಕ್ಷಕ ಜಗದೀಶ ಸಾಲಹಳ್ಳಿ ನಿರೂಪಿಸಿದರು. ಕಾರ್ಯದರ್ಶಿ ಬಂಡುರಾವ ಕುಲಕರ್ಣಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.