ತಿರುವನಂತಪುರ (ಪಿಟಿಐ): ಮುಂಬರುವ ಲೋಕಸಭಾ ಚುನಾವಣೆಯು ದೇಶದ ನಾಯಕತ್ವ ಕುರಿತ ‘ಜನಮತಸಂಗ್ರಹ’ವಾಗಲಿದೆ ಎಂದು ಅಭಿಪ್ರಾಯ ಪಟ್ಟಿರುವ ಬಿಜೆಪಿ ಮುಖಂಡ ಅರುಣ್ ಜೇಟ್ಲಿ, ಹೆಚ್ಚು ಕಡಿಮೆ ಇದು ಅಧ್ಯಕ್ಷೀಯ ಚುನಾವಣೆಯಾಗಲಿದೆ ಎಂದು ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸುತ್ತದೆ ಎಂಬ ವದಂತಿಗಳು ಕೇಳಿ ಬರುತ್ತಿರುವಂತೆಯೇ ಜೇಟ್ಲಿ ಈ ಹೇಳಿಕೆ ನೀಡಿದ್ದಾರೆ. ಆದರೆ ಅವರು ಮೋದಿ ಹೆಸರನ್ನಾಗಲೀ ಅಥವಾ ಪಕ್ಷದ ಇತರ ನಾಯಕರ ಹೆಸರನ್ನಾಗಲೀ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ.
‘ದೇಶದ ಪ್ರಮುಖ ವಿರೋಧ ಪಕ್ಷವು ಸಮರ್ಥ ನಾಯಕತ್ವವನ್ನು ಹೊಂದಿರುವಾಗ ಮತ್ತು ಪ್ರಮುಖ ವ್ಯಕ್ತಿಯೊಬ್ಬರನ್ನು ನಾಯಕರನ್ನಾಗಿ ಬಿಂಬಿಸುತ್ತಿರು ವಾಗ ಚುನಾ ವಣೆಯು ಭಾಗಶಃ ಅಧ್ಯಕ್ಷೀಯ ಚುನಾವಣೆ (ಜನರೇ ನೇರವಾಗಿ ನಾಯಕನ್ನು ಆರಿಸುವುದು) ಆಗಲಿದೆ’ ಎಂದು ಜೇಟ್ಲಿ ಅಭಿಪ್ರಾಯ ಪಟ್ಟರು. ಅರವಿಂದೋ ಕಲ್ಚರಲ್ ಸೊಸೈಟಿ ಆಯೋಜಿಸಿದ್ದ ‘ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ’ ವಿಷಯದ ಕುರಿತು ಮಾತನಾಡಿದ ಜೇಟ್ಲಿ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದರು.
ನಾಯಕತ್ವದ ಕೊರತೆಯಿಂದಾಗಿ ಯುಪಿಎ ಆಡಳಿತದಲ್ಲಿ ರಾಷ್ಟ್ರವು ತೀವ್ರ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಜೇಟ್ಲಿ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಟೀಕಿಸಿದರು. ‘ಚುನಾವಣೆಗೆ ಸಿದ್ಧತೆಗಳು ಆರಂಭಗೊಂಡಿವೆ. ಶೀಘ್ರದಲ್ಲಿ ನಾವು ನಮ್ಮ ನಾಯಕನ ಹೆಸರನ್ನು ಘೋಷಿಸಲಿದ್ದೇವೆ. ಆ ವಿಚಾರದಲ್ಲಿ ನಮ್ಮಲ್ಲಿ ಒಮ್ಮತವಿದೆ’ ಎಂದೂ ಅವರು ನುಡಿದರು.
ಪ್ರಧಾನಿ ಅಭ್ಯರ್ಥಿ: ಶೀಘ್ರ ನಿರ್ಧಾರ
ನವದೆಹಲಿ (ಐಎಎನ್ಎಸ್): ಮುಂಬರುವ ಲೋಕಸಭಾ ಚುನಾವಣೆಗೆ ಯಾರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬ ಬಗ್ಗೆ ಬಿಜೆಪಿ ಸಂಸದೀಯ ಮಂಡಳಿ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಪಕ್ಷದ ಮುಖಂಡ ರವಿಶಂಕರ್ ಪ್ರಸಾದ್ ಬುಧವಾರ ಹೇಳಿದ್ದಾರೆ. ‘ಶೀಘ್ರದಲ್ಲಿ ಸಂಸದೀಯ ಮಂಡಳಿ ಸಭೆ ಸೇರಲಿದ್ದು, ಪ್ರಧಾನಿ ಅಭ್ಯರ್ಥಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.
ಮೋದಿ ಅವರು ಪಕ್ಷದ ಉನ್ನತ ನಾಯಕರಲ್ಲೊಬ್ಬರು. ಅವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಹಂಬಲ ನಮಗಿದೆ. ಆದರೆ ಈ ಬಗ್ಗೆ ಸಂಸದೀಯ ಮಂಡಳಿ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು’ ಎಂದು ಬಿಜೆಪಿ ಮುಖಂಡ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ಬಿಜೆಪಿ ಸಂಸದೀಯ ಮಂಡಳಿಯ ಸಭೆಯು ಶುಕ್ರವಾರ ನಡೆಯಲಿದೆ. ಬಿಜೆಪಿಯು ಅಂದೇ ಪ್ರಧಾನಿ ಅಭ್ಯರ್ಥಿಯ ಹೆಸರು ಘೋಷಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.