ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕಿಯರ ನಿಂಬೆಹುಳಿ

Last Updated 17 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಅಮಿತಾಬ್ ಬಚ್ಚನ್ ಜೊತೆ ಹಾಲಿವುಡ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅನುಪಮ್ ಖೇರ್ ಇದೇ 27ರಂದು ತಮ್ಮ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಮಂತ್ ಹೆಗಡೆ ಹೇಳಿದ ಸಂದರ್ಭದಲ್ಲಿಯೇ ಅವರ ಅಕ್ಕ-ಪಕ್ಕ ನಿವೇದಿತಾ ಹಾಗೂ ಮಧುರಿಮಾ ಎಂಬ ಆಧುನಿಕ ಲಲನೆಯರು ಆಸೀನರಾಗಿದ್ದರು.

ಬಾಲಿವುಡ್ ನಿರ್ದೇಶಕ ಸುಭಾಷ್ ಘಾಯ್ ಅವರ ಮುಕ್ತ ಆರ್ಟ್ಸ್ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡು ನಿರ್ಮಾಣವಾಗುತ್ತಿರುವ `ನಿಂಬೆಹುಳಿ~ ಚಿತ್ರಕ್ಕೆ ಖುದ್ದು ಹೇಮಂತ್ ಹೆಗಡೆ ನಿರ್ದೇಶಕ. ಅಕ್ಟೋಬರ್ 2ರಿಂದ ಇದುವರೆಗೆ 35 ದಿನ ಚಿತ್ರೀಕರಣ ನಡೆಸಿರುವ ಹೇಮಂತ್ ಹೆಗಡೆ, ಅನುಪಮ್ ಖೇರ್ ಹಾಗೂ ಜೈದೇವ್ ಎಂಬ ಆಮದು ನಟರನ್ನು ನಿರ್ದೇಶಿಸಲು ಕಾತುರರಾಗಿದ್ದಾರೆ. ಇವರಿಬ್ಬರ ಉಪಸ್ಥಿತಿಯಿಂದ ಚಿತ್ರದ ಗುಣಮಟ್ಟ ಮೇಲೇರಲಿದೆ ಎಂಬುದು ಅವರ ನಂಬಿಕೆ.

ಚುಟುಕು ಕವಿ ಡುಂಡಿರಾಜ್ ಈ ಚಿತ್ರಕ್ಕೆ `ಅಯ್ಯೋ ರಾಮಾ ರಾಮಾ ಫಸ್ಟ್‌ನೈಟಲ್ಲೂ ಟ್ರಾಫಿಕ್ ಜಾಮಾ...~ ಎಂಬ ಗೀತೆಯನ್ನು ಬರೆದಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕ್ಯಾಮೆರಾ ಕೆಲಸವನ್ನು ಸಂದೀಪ್ ಕುಮಾರ್ ನಿರ್ವಹಿಸುತ್ತಿದ್ದು, ಪಿ.ಆರ್.ಸೌಂದರ್‌ರಾಜ್ ಸಂಕಲನದ ಹೊಣೆ ಹೊರಲು ಸಿದ್ಧರಾಗಿದ್ದಾರೆ.

`ಲೀಥಲ್ ಕಮಿಷನ್~ ಎಂಬ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿದ ಅನುಭವ ಮಧುರಿಮಾ ಬೆನ್ನಿಗಿದೆಯಂತೆ. ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದ ಕೋಮಲ್ ಝಾ ನಟನೆಯೂ ಚಿತ್ರದಲ್ಲಿದೆ. ಈಗಾಗಲೇ ಅವರು ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಅನುಭವ ಪಡೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಹೇಮಂತ್ ತಾವು ಆಯ್ಕೆ ಮಾಡಿದ್ದ ಇನ್ನೊಬ್ಬ ನಾಯಕಿ ಸೃಷ್ಟಿಸಿದ್ದ ವಿವಾದವೊಂದನ್ನು ಹೇಳಿಕೊಂಡರು. ನಿವೇದಿತಾ ಜಾಗಕ್ಕೆ ಆಯ್ಕೆಯಾಗಿದ್ದ ಆ ನಾಯಕಿಗೆಂದು ಲಂಗ-ದಾವಣಿಯನ್ನು ತರಿಸಿದ್ದರಂತೆ. ಅದು ಹಳೆಯ ವಸ್ತ್ರವಾದ್ದರಿಂದ, `ಇದು ನಿಮ್ಮ ಹೆಂಡತಿ ವರ್ಷಗಳ ಹಿಂದೆ ಬಳಸಿದ್ದೆ?~ ಎಂದು ಆ ನಟಿ ತಗಾದೆ ತೆಗೆದರಂತೆ.
 
ಮುಂಬೈನ ಮತ್ತೊಬ್ಬ ನಟಿ ಬಟ್ಟೆ ಸರಿಯಾಗಿ ಹೊಲೆದಿಲ್ಲ ಎಂದು ಚಕಾರ ತೆಗೆದ ಘಟನೆಯನ್ನೂ ಹೇಮಂತ್ ಅನುಭವಿಸಿದ್ದಾರೆ. ಈ ಕಾಲದ ನಾಯಕಿಯರು ಇಷ್ಟೆಲ್ಲಾ ಕಾಟ ಕೊಡುತ್ತಾರಾದರೂ ಅವರು ಚಿತ್ರವನ್ನು ಆದಷ್ಟು ಬೇಗ ಮುಗಿಸುವ ಸಂಕಲ್ಪ ತೊಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT