ಬೆಂಗಳೂರು (ಪಿಟಿಐ) ; ಅಂತರಿಕ್ಷ್- ದೇವಾಸ್ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಇಸ್ರೊ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಹಾಗೂ ಇನ್ನಿತರ ಮೂವರು ಹಿರಿಯ ವಿಜ್ಞಾನಿಗಳ ವಿರುದ್ಧ ಇಸ್ರೊ ನೇಮಿಸಿರುವ ಐವರು ಸದಸ್ಯರ ಸಮಿತಿಯು ಶನಿವಾರ ರಾತ್ರಿ ದೋಷಾರೋಪ ಹೊರಿಸಿದೆ.
ಜಾಗೃತ ದಳದ ಮಾಜಿ ಮುಖ್ಯ ಆಯುಕ್ತ ಪ್ರತ್ಯೂಶ್ ಸಿನ್ಹಾ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ವರದಿಯು, ` ಅಂತರಿಕ್ಷ್- ದೇವಾಸ್ ಒಪ್ಪಂದವು ಪಾರದರ್ಶಕವಾಗಿಲ್ಲ~ ಎಂದು ಹೇಳಿದೆ. ಅಲ್ಲದೇ ಮಾಧವನ್ ನಾಯರ್, ಭಾಸ್ಕರ ನಾರಾಯಣ, ಕೆ.ಆರ್.ಶ್ರೀಧರ ಮೂರ್ತಿ ಹಾಗೂ ಕೆ.ಎನ್.ಶಂಕರ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ. ಈ ಒಪ್ಪಂದದಲ್ಲಿ ಕೇವಲ ಆಡಳಿತಾತ್ಮಕ ಹಾಗೂ ಕಾರ್ಯವಿಧಾನ ಲೋಪಗಳು ಮಾತ್ರವಲ್ಲ; ಕೆಲ ವ್ಯಕ್ತಿಗಳ ಒಳಸಂಚು ಸಹ ಅಡಗಿದೆ ಎಂದು ಅಭಿಪ್ರಾಯಪಟ್ಟಿದೆ.
`ಒಪ್ಪಂದದ ಅನುಮೋದನೆ ಪ್ರಕ್ರಿಯೆ ಅಪೂರ್ಣವಾಗಿದೆ. ಅಲ್ಲದೇ ಈ ಬಗ್ಗೆ ಕೇಂದ್ರ ಸಂಪುಟ ಹಾಗೂ ಬಾಹ್ಯಾಕಾಶ ಆಯೋಗಕ್ಕೆ ಅಸ್ಪಷ್ಟ ಮಾಹಿತಿ ನೀಡಲಾಗಿದೆ. ಇಡೀ ಒಪ್ಪಂದವು ದೇವಾಸ್ ಪರವಾಗಿರುವುದು ಸ್ಪಷ್ಟವಾಗುತ್ತದೆ ಎಂದಿರುವ ಸಮಿತಿಯು, ಬಾಹ್ಯಾಕಾಶ ಇಲಾಖೆ ಹಾಗೂ ಹಣಕಾಸು ಸಚಿವಾಲಯದ ಕಾನೂನು ಘಟಕಗಳಿಂದ ಇದಕ್ಕೆ ಅನುಮೋದನೆ ಪಡೆಯದಿರುವುದನ್ನೂ ಎತ್ತಿ ಹಿಡಿದಿದೆ.