ಬೆಂಗಳೂರು (ಪಿಟಿಐ): ಅಂತರಿಕ್ಷ್-ದೇವಾಸ್ ಒಪ್ಪಂದದ ಹಿನ್ನೆಲೆಯಲ್ಲಿ ನಡೆದ ವಿದ್ಯಮಾನಗಳ ಕುರಿತು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ವಿಶ್ವಾಸ ವ್ಯಕ್ತಪಡಿಸಿದರು.
`ಈ ಒಪ್ಪಂದದ ಹಿನ್ನೆಲೆಯಲ್ಲಿ ನನ್ನನ್ನೂ ಸೇರಿ ನಾಲ್ವರು ವಿಜ್ಞಾನಿಗಳು ಯಾವುದೇ ಸರ್ಕಾರಿ ಹುದ್ದೆ ಹೊಂದದಂತೆ ನಿಷೇಧ ಹೇರಿರುವ ಸರ್ಕಾರಿ ಆದೇಶದ ಪ್ರತಿಗೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೇನೆ. ಆದೇಶದ ಪ್ರತಿ ಪಡೆದು, ಪರಿಶೀಲಿಸಲು ಇನ್ನೂ ಒಂದು ತಿಂಗಳು ಬೇಕಾಗಬಹುದು~ ಎಂದರು.
ಒಪ್ಪಂದದ ಕುರಿತು ತನಿಖೆ ನಡೆಸಿದ್ದ ಬಿ.ಕೆ. ಚತುರ್ವೇದಿ ಅವರು ವಾಸ್ತವವನ್ನು ಹೊರತಂದಿದ್ದಾರೆ. ಈ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಇದೇ ವಿಷಯವನ್ನು ಚತುರ್ವೇದಿ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ ಎಂದು ನಾಯರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವಾಸ್-ಅಂತರಿಕ್ಷ್ ನಡುವಿನ ಒಪ್ಪಂದದಲ್ಲಿ ವಿಜ್ಞಾನಿಗಳು ದುರುದ್ದೇಶದಿಂದ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಚತುರ್ವೇದಿ ಅವರು ತಮ್ಮ ವರದಿಯಲ್ಲಿ ಹೇಳಿದ್ದರು. ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ ಅವರೂ ಚತುರ್ವೇದಿ ಅವರ ತಂಡದ ಸದಸ್ಯರಾಗಿದ್ದರು.