ಬೆಂಗಳೂರು: `ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ' ನೀಡುವ `ಬರಗೂರು ಪ್ರಶಸ್ತಿ'ಗೆ ಸಾಹಿತಿ ಡಾ. ಕೆ.ವಿ. ನಾರಾಯಣ ಮತ್ತು `ಪ್ರಜಾವಾಣಿ'ಯ ಸಹಾಯಕ ಸಂಪಾದಕ ಗಂಗಾಧರ ಮೊದಲಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುಂದರರಾಜ್ ಅರಸು ಅವರು ತಿಳಿಸಿದರು.
ಬರಗೂರು ರಾಮಚಂದ್ರಪ್ಪ ಅವರ ಆತ್ಮೀಯರು ಸ್ಥಾಪಿಸಿರುವ ಪ್ರತಿಷ್ಠಾನವು ಬರಗೂರರ ಸಾಮಾಜಿಕ ಕಾಳಜಿಯನ್ನು ಆದ್ಯತೆಯಾಗಿಟ್ಟುಕೊಂಡು ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ಪ್ರಶಸ್ತಿ ನೀಡಲು ನಿರ್ಧರಿಸಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ಪ್ರಶಸ್ತಿಯು ್ಙ25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನಗರದ ಯವನಿಕಾ ಸಭಾಂಗಣದಲ್ಲಿ ಭಾನುವಾರ (ಏ.21) ನಡೆಯಲಿರುವ ಸಮಾರಂಭದಲ್ಲಿ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಚಲನಚಿತ್ರರಂಗದಲ್ಲಿ ನೂರು ಚಿತ್ರಗಳಲ್ಲಿ ನಟಿಸಿದ ನಟ ಶಿವರಾಜಕುಮಾರ್ ಅವರನ್ನು ಸನ್ಮಾನಿಸಲಾಗುವುದು' ಎಂದು ಅವರು ವಿವರ ನೀಡಿದರು.