ಮುಂಬೈ: ನಾರಾಯಣ ಗುರುಗಳು ಪುರೋಹಿತಶಾಹಿ ವ್ಯವಸ್ಥೆ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು. ಸಮಾನತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದವರು. ಸದಾ ಮನುಕುಲದ ಏಳ್ಗೆಯನ್ನು ಬಯಸಿದವರು ಎಂದು ಲೇಖಕ ಡಾ. ಕಾಳೇಗೌಡ ನಾಗವಾರ ಅವರು ಹೇಳಿದರು.
ಅವರು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್. ಉಪಾಧ್ಯ ಅವರಿಗೆ ಬಿಲ್ಲವರ ಭವನದಲ್ಲಿ `ನಾರಾಯಣಗುರು ಸಾಹಿತ್ಯ ಪ್ರಶಸ್ತಿ~ ಪ್ರದಾನ ಮಾಡಿದ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಿಲ್ಲವರ ಸಂಘ ಮುಂಬೈಯಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಅವರು ಪ್ರಶಂಸಿದರು.ಪ್ರಶಸ್ತಿ ಸ್ವೀಕರಿಸಿದ ಡಾ.ಉಪಾಧ್ಯ ಅವರು `ಕೇವಲ ಪ್ರತಿಭೆಯನ್ನು ಮಾನದಂಡವಾಗಿಸಿ ನೀಡುವ ಈ ಪ್ರಶಸ್ತಿ ಹೆಚ್ಚು ಮಹತ್ವದ್ದು. ಬಿಲ್ಲವರ ಸಂಘ ಜನಮುಖಿಯಾಗಿ ಹಲವಾರು ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ~ ಎಂದು ಹೇಳಿದರು.ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಚಂದ್ರಶೇಖರ ಪಾಲೆತ್ತಾಡಿ, ಎಂ.ಬಿ. ಕುಕ್ಯಾನ್ ಮಾತನಾಡಿ ಉಪಾಧ್ಯ ಅವರನ್ನು ಅಭಿನಂದಿಸಿದರು.