ಹುಬ್ಬಳ್ಳಿ: `ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪವಾದ ಹಾಗೂ ಅತ್ಯಂತ ಸೂಕ್ಷ್ಮ ಎನಿಸಿದ ಮರು ಅಂಗಾಂಶ ಚಿಕಿತ್ಸೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾ ಲಯ ಹಾಗೂ ಮುಜುಮದಾರ ಶಾ ಕ್ಯಾನ್ಸರ್ ಕೇಂದ್ರ ಯಶಸ್ಸು ಸಾಧಿಸಿವೆ~ ಎಂದು ಎಂದು ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯ ಡಾ.ಶರತ್ ದಾಮೋದರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ನಾರಾಯಣ ಹೃದಯಾಲಯದ ರಕ್ತಶಸ್ತ್ರ ಚಿಕಿತ್ಸಾ ವಿಭಾಗವು ರಕ್ತ ಸಂಬಂಧಿಗಳಿಂದ ಎಲುಬಿನ ಅಸ್ಥಿ ಮಜ್ಜೆಯನ್ನು ದಾನ ಪಡೆದು ಅದನ್ನು ವೃದ್ಧಿಗೊಳಿಸುವ ಮೂಲಕ ರಕ್ತ ಸಂಬಂಧಿ ಕಾಯಿಲೆಗಳಾದ ತೆಲಿಸೀ ಮಿಯಾ, ಅಪ್ಲಾಸ್ಟಿಕ್ ಅನಿಮಿಯಾ, ರಕ್ತದ ಕ್ಯಾನ್ಸರ್ (ಲುಕೇಮಿಯಾ), ಲಿಂಪೋಮಾ, ಮೈಲೋಮಾ ಕಾಯಿಲೆಗಳನ್ನು ಸಂಪೂರ್ಣ ಗುಣಪಡಿಸಲು ಯಶಸ್ವಿಯಾಗಿದೆ~ ಎಂದು ಹೇಳಿದರು.
`ಈ ಚಿಕಿತ್ಸೆಗೆ ಮಕ್ಕಳಿಗೆ 8ರಿಂದ 10 ಲಕ್ಷ ಹಾಗೂ ದೊಡ್ಡವರಿಗೆ 10ರಿಂದ 12 ಲಕ್ಷ ಖರ್ಚು ಬರುತ್ತದೆ. ಆದರೆ ವಿದೇಶಗಳಲ್ಲಿ ಈ ಚಿಕಿತ್ಸೆ ಇನ್ನಷ್ಟು ದುಬಾರಿಯಾಗಿದ್ದು, ಇಲ್ಲಿಗೆ ಕಡಿಮೆ ಖರ್ಚಿಗೆ ಚಿಕಿತ್ಸೆ ದೊರೆಯುವುದರಿಂದ ವಿದೇಶದ ರೋಗಿಗಳು ಇಲ್ಲಿಗೆ ಬರುತ್ತಿದ್ದು, ವೈದ್ಯಕೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಇದರಿಂದ ಸಹಾಯವಾಗಿದೆ~ ಎಂದರು.
`ಆಗ ತಾನೆ ಹುಟ್ಟಿದ ಶಿಶುಗಳ ಎಲುಬು ಶಕ್ತಿಹೀನಗೊಂಡು ಎಲುಬಿನ ದೇಹಸಾರ ತೊಂದರೆ ಯಿಂದಾಗಿ ಶಾಶ್ವತ ಅಂಗವೈಕಲ್ಯತೆಗೆ ತುತ್ತಾಗುವವರಿಗೆ ಹಾಗೂ ಸಾವನ್ನುಪ್ಪುವ ಅಪಾಯ ಇರುವವರಿಗೆ ಈ ಚಿಕಿತ್ಸೆ ರಾಮಬಾಣವಾಗಿದ್ದು, ನಾರಾಯಣ ಹೃದಯಾ ಲಯದ ತಜ್ಞರ ತಂಡ ಎಲುಬಿನ ಕೊಬ್ಬಿನಾಂಶ ವೃದ್ಧಿಗೆ ಅಂಗಾಂಶ ಕಸಿ ಚಿಕಿತ್ಸೆ ನೀಡುತ್ತಿದೆ~ ಎಂದು ಹೇಳಿದರು.
ಮಧ್ಯಮ ವರ್ಗ ಹಾಗೂ ಬಡವರಿಗೆ ಈ ಚಿಕಿತ್ಸೆ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು, ಈ ಚಿಕಿತ್ಸೆಯಿಂದ ತಲೆಸೀಮಿಯಾ ರೋಗದಿಂದ ಸಂಪೂರ್ಣ ಗುಣಮುಖವಾಗಿರುವ ವಿಜಾಪುರದ ನಂದೀಶ ಎಂಬ ಬಾಲಕನ ನಿದರ್ಶನ ನೀಡಿದರು.